ಮಾಗಡಿ: ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ಸಬ್ಇನ್ಪೆಕ್ಟರ್ ಟಿ.ವೆಂಕಟೇಶ್ ತಿಳಿಸಿದರು.
ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಬಳಿ ಹೆಲ್ಮೆಟ್ ಜಾಗೃತಿ ಜಾಥಾಥಚಾಲನೆ ನೀಡಿ ಅವರು ಮಾತನಾಡಿದರು.
‘ವಾಹನ ಸವಾರರು ವಾಹನಗಳಿಗೆ ಸಂಬಂಧಪಟ್ಟ ದಾಖಲೆಗಳನ್ನು ಸದಾಕಡ್ಡಾಯವಾಗಿ ಜತೆಯಲ್ಲಿಟ್ಟುಕೊಂಡಿರಬೇಕು. ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿದರೆ ಸ್ಥಳದಲ್ಲಿಯೇ ದಂಡ ತೆರಬೇಕಾಗುತ್ತದೆ. 18 ವರ್ಷದ ಒಳಗಿನವರು ವಾಹನ ಚಲಾಯಿಸುವುದು ಅಪರಾಧ’ ಎಂದರು.
ಚನ್ನಬಸವೇಶ್ವರ ಬಸ್ ಮಾಲೀಕ ಮಧು ಮಾತನಾಡಿ ‘ವಾಹನ ಚಲಾಯಿಸುವಾಗ ಹೆಲ್ಮೆಟ್ ಧರಿಸುವುದರಿಂದ ಸಂಭವನೀಯ ಅಪಘಾತಗಳಿಂದ ತಲೆಗೆ ಪೆಟ್ಟಾಗುವುವುದು ತಪ್ಪುತ್ತದೆ. ಪೊಲೀಸರು ನೀಡುವ ಸೂಚನೆಗಳನ್ನು ಅಗತ್ಯವಾಗಿ ಪಾಲಿಸಬೇಕು’ ಎಂದು ಹೇಳಿದರು.
ಪಟ್ಟಣದ ಮುಖ್ಯ ಬೀದಿಗಳಲ್ಲಿ ಧ್ವನಿವರ್ಧಕದ ಮೂಲಕ, ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸುವ ಸಲುವಾಗಿ ಬೈಕ್ ಜಾತಾ ನಡೆಸಿದರು. ಪೊಲೀಸ್ ಸಿಬ್ಬಂದಿ ಇದ್ದರು.