ಸದ್ಯ ಪ್ರಕರಣವೊಂದರಲ್ಲಿ ಬಂಧಿಯಾಗಿರುವ ಮಹೇಶ್ ಗೌಡ ಎಂಬ ಕೈದಿಯ ಹುಟ್ಟುಹಬ್ಬವು ಜೈಲಿನ ಒಳಗೇ ಮೂರು ದಿನದ ಹಿಂದೆ ನಡೆದಿತ್ತು. ಆತನೊಂದಿಗೆ ಇತರೆ ಏಳು ಕೈದಿಗಳು ಫೋಟೊಗೆ ಪೋಸ್ ನೀಡಿದ್ದು, ಆ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಚಿತ್ರ ಪೊಲೀಸರಿಗೂ ತಲುಪಿದ್ದು, ಅದನ್ನು ಆಧರಿಸಿ ಮಂಗಳವಾರ ಸಂಜೆ ರಾಮನಗರ ಎಸ್ಪಿ ಸಂತೋಷ್ ಬಾಬು ನೇತೃತ್ವದ ತಂಡವು ಜಿಲ್ಲಾ ಕಾರಾಗೃಹದ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಒಂದು ಆ್ಯಂಡ್ರಾಯ್ಡ್ ಮೊಬೈಲ್, ಒಂದು ಕೀ ಪ್ಯಾಡ್ ಮೊಬೈಲ್ , ಮೂರು ಸಿಮ್ ಕಾರ್ಡ್ ದೊರೆತಿದೆ. ಜೈಲಿನಲ್ಲಿ ಮೊಬೈಲ್ ಬಳಸಿದ ಆರೋಪದ ಮೇಲೆ ಮಹೇಶ್ ಗೌಡ ಹಾಗೂ ಸಯ್ಯದ್ ವಲ್ಲಿ, ಜುಬೇರ್, ದಿಲೀಪ್, ಯಶವಂತ್, ಅರುಣೇಶ್, ಗಿರೀಶ್, ಚಂದ್ರು ಎಂಬುವರ ಮೇಲೂ ಪ್ರಕರಣ ದಾಖಲಾಗಿದೆ.