ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಡದಿ | ಮಕ್ಕಳ ಅಪೌಷ್ಠಿಕತೆ ನಿವಾರಣೆಗೆ ಬಿಸಿಯೂಟ ಯೋಜನೆ

ಶೇಷಗಿರಿಹಳ್ಳಿಯಲ್ಲಿ ಮಹಿಳಾ, ಮಕ್ಕಳ ಗ್ರಾಮ‌ಸಭೆ
Published 8 ಜನವರಿ 2024, 8:22 IST
Last Updated 8 ಜನವರಿ 2024, 8:22 IST
ಅಕ್ಷರ ಗಾತ್ರ

ಬಿಡದಿ: ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಹಾಗೂ ಮಂಚನಾಯಕನಹಳ್ಳಿ ಗ್ರಾಮ ಪಂಚಾಯತಿ ವತಿಯಿಂದ ಶೇಷಗಿರಿಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಗ್ರಾಮ‌ಸಭೆ ನಡೆಯಿತು.

ಈ ವೇಳೆ ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿ, ಸರ್ಕಾರಿ ಶಾಲಾ ಮಕ್ಕಳಿಗೆ ಅಪೌಷ್ಟಿಕತೆ ನಿವಾರಣೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಲು ಹಾಗೂ ಬಿಸಿಯೂಟ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಸರ್ಕಾರಕ್ಕೆ ಮಹಿಳಾ ಮತ್ತು ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ಇದೆ. ಹಾಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದರು.

ಮಹಿಳಾ ಮತ್ತು‌ ಮಕ್ಕಳ ಗ್ರಾಮ ಸಭೆಯನ್ನು ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಮಾಡಬೇಕು. ಇತ್ತೀಚಿನ ಕಾಲದಲ್ಲಿ ಜಾನಪದ ಕಲೆ ನಶಿಸುತ್ತಿದೆ. ಜತೆಗೆ ಶಾಲೆಗಳಲ್ಲಿ ಪಾಶ್ಚಿಮಾತ್ಯ ಕಲೆ ನೃತ್ಯಗಳ ಕಡೆಗೆ ಹೆಚ್ಚು ಮಾರು ಹೋಗುತ್ತಿದ್ದಾರೆ. ಶಾಲಾ ಹಂತಗಳಲ್ಲಿ ಮಕ್ಕಳಿಗೆ ವಿದ್ಯೆಯ ಜತೆಗೆ ಜಾನಪದ ಕಲೆಗಳನ್ನು ಪರಿಚಯ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ವರಲಕ್ಷ್ಮಿ ಮಾತನಾಡಿ, ಗ್ರಾಮ ಪಂಚಾಯತಿ ವತಿಯಿಂದ ನಮ್ಮ ವ್ಯಾಪ್ತಿಯ ಎಲ್ಲಾ ಗ್ರಾಮದಲ್ಲೂ ಮಹಿಳಾ ಮತ್ತು ಮಕ್ಕಳ ಗ್ರಾಮ ಸಭೆ ನಡೆಸಿ, ಅವರ ಸಮಸ್ಯೆಗಳನ್ನು ಕೇಳಿ ಕೆಲವು‌ ಸಮಸ್ಯೆಗಳನ್ನ ಸ್ಥಳದಲ್ಲೇ ಪರಿಹಾರ ಮಾಡಿದ್ದೇವೆ. ಜತೆಗೆ ಇನ್ನೂ ಕೆಲವು ಸಮಸ್ಯೆಗಳನ್ನ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಗ್ರಾಮ ಪಂಚಾಯತಿ ಪಿಡಿಒ ಯತೀಶ್‌ ಚಂದ್ರ ಮಾತನಾಡಿ, ಗ್ರಾಮ ಪಂಚಾಯಿತಿಯ ಅನುದಾನದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಪ್ರತಿಭಾವಂತ 126 ವಿದ್ಯಾರ್ಥಿಗಳಿಗೆ ₹2,500 ರಿಂದ 20,000 ದವರೆಗೆ ಪ್ರೋತ್ಸಾಹ ಧನ ನೀಡಲಾಗಿದೆ. 11 ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌, 100 ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕೆ ಅನುದಾನ ನೀಡಲಾಗುತ್ತದೆ. ಜತೆಗೆ ಪಂಚಾಯತಿ ವ್ಯಾಪ್ತಿಯಲ್ಲಿನ ಎಲ್ಲಾ ಸರ್ಕಾರಿ ಶಾಲೆಗಳಿಗೆ ತರಕಾರಿ, ಸಾಂಬಾರು ಪುಡಿ, ಮೊಳಕೆ ಕಾಳು ವಿತರಣೆ ಮಾಡಲಾಗುತ್ತಿದೆ ಎಂದರು.

ಸ್ಮಾರ್ಟ್ ಕ್ಲಾಸ್ ಉದ್ಘಾಟನೆ: ಕೋಕೋ ಕೋಲಾ ಕಂಪನಿಯ ಸಾಮಾಜಿಕ ಹೊಣೆಗಾರಿಕೆ ಅಡಿಯಲ್ಲಿ ಶೇಷಗಿರಿಹಳ್ಳಿಯ ಶಾಲೆಯಲ್ಲಿ  ಅಳವಡಿಸಿದ್ದ ಸ್ಮಾರ್ಟ್ ಆಡಿಯೊ, ವಿಡಿಯೊ, ಎಲ್‌ಇಡಿ ಬೋರ್ಡ್ ಉದ್ಘಾಟನೆ ಮಾಡಲಾಯಿತು. ಈ‌ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಐದು ಸರ್ಕಾರಿ ಶಾಲೆಗಳಲ್ಲಿ  ಸ್ಮಾರ್ಟ್ ಬೋರ್ಡ್ ಅಳವಡಿಕೆ ಮಾಡಲಾಗಿದೆ. ಮಂಚನಾಯಕನಹಳ್ಳಿ ಗ್ರಾಮ ಪಂಚಾಯತಿ ವತಿಯಿಂದ ಕೂಡ ಐದು ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ ಬೋರ್ಡ್ ಅಳವಡಿಕೆಗೆ ಚಿಂತನೆ ಮಾಡಲಾಗಿದೆ.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಸುಶೀಲಾ, ಸದಸ್ಯರಾದ ಸತೀಶ್ ಕುಮಾರ್, ನಾಗೇಶ್, ಪುಷ್ಪರಾಜ್, ಆನಂದ, ಭಾಗ್ಯಮ್ಮ, ಜ್ಯೋತಿ, ರಮ್ಯಾ, ಪವಿತ್ರಾ, ಗೋವಿಂದರಾಜು, ಶಂಕುಕುಮಾರ್, ಶಾಂತರಾಜು, ತಾಯಮ್ಮ, ಮಂಜುಳಾ ಸೇರಿದಂತೆ ಶಾಲೆಯ ಶಿಕ್ಷಕ ವೃಂದವರು ಉಪಸ್ಥಿತರಿದ್ದರು .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT