ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ–ಜೆಡಿಎಸ್ ಮೈತ್ರಿ ಅಭ್ಯರ್ಥಿಯಿಂದ ಕಾಂಗ್ರೆಸ್ ತಳಮಳ: ನಿಖಿಲ್ ಕುಮಾರಸ್ವಾಮಿ

Published 26 ಮಾರ್ಚ್ 2024, 5:17 IST
Last Updated 26 ಮಾರ್ಚ್ 2024, 5:17 IST
ಅಕ್ಷರ ಗಾತ್ರ

ಹಾರೋಹಳ್ಳಿ: ಲೋಕಸಭಾ ಚುನಾವಣೆಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಡಾ.ಸಿ.ಎನ್. ಮಂಜುನಾಥ್ ಅವರನ್ನು ಬಿಜೆಪಿ–ಜೆಡಿಎಸ್ ಮೈತ್ರಿ ಎಂದು ಘೋಷಿಸಿದ ತಕ್ಷಣ ಕಾಂಗ್ರೆಸ್‌ಗೆ ತಳಮಳ ಶುರುವಾಗಿದೆ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ಹಾರೋಹಳ್ಳಿಯ ಚೆನ್ನಮ್ಮ ಮಾದಯ್ಯ ಕನ್ವೆನ್‌ಷನ್ ಹಾಲ್ ನಲ್ಲಿ ಸೋಮವಾರ ನಡೆದ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಸಮ್ಮಿಲನ ಸಭೆಯಲ್ಲಿ ಮಾತನಾಡಿದ ಅವರು,  ಖುದ್ದು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹಸಚಿವ ಅಮಿತ್ ಷಾ ಅವರು ಕರೆ ಮಾಡಿ ಡಾ.ಸಿ ಎನ್ ಮಂಜುನಾಥ್ ಅವರನ್ನೇ ಅಭ್ಯರ್ಥಿ ಮಾಡಿ ಎಂದು ಸೂಚಿಸಿದ್ದಾರೆ. ಸಿ.ಪಿ. ಯೋಗೇಶ್ವರ ಅವರೇ ಡಾ.ಸಿ.ಎನ್. ಮಂಜುನಾಥ್ ಅವರ ಮನವೂಲಿಸಿದ್ದು ಎಂದರು.

‘ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನವರು ಮತದಾರರಿಗೆ ಕೂಪನ್ ನೀಡಿ ಮತ ಪಡೆದಿದ್ದಾರೆ. ಆದರೆ, ನಾವು ಜನರಿಗೆ ಮೋಸ ಮಾಡಿ ಮತ ಹಾಕಿಸಿಕೊಳ್ಳುವುದಿಲ್ಲ. ನಿಮ್ಮ ಋಣ ನಮ್ಮ ಮೇಲಿದೆ. ಚುನಾವಣೆಯಲ್ಲಿ ಸೋಲು ಗೆಲುವು ಸಹಜ. ಸೋಲಿಗೆ ಉತ್ತರ ಕೊಡಬೇಕಾದ ಅವಕಾಶ ನಮಗೆ ಒದಗಿ ಬಂದಿದೆ. ಈ ಹಿಂದೆ ನಡೆ ವಿಧಾನ ಸಭೆ ಚುನಾವಣೆಯಲ್ಲಿ ಮೈತ್ರಿ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದರೆ ಕಾಂಗ್ರೆಸ್ ಅಷ್ಟು ಸ್ಥಾನ ಗೆಲ್ಲುತ್ತಿರಲಿಲ್ಲ’ ಎಂದರು.

‘ಲೋಕಸಭಾ ಚುನಾವಣೆ ಘೋಷಣೆ ಆದ ನಂತರ ಕುಕ್ಕರ್, ತವಾ, ಸೀರೆ ಹಂಚುವ ಕೆಲಸ ಮಾಡುತ್ತಿರುವುದನ್ನು ನಮ್ಮ ಕಾರ್ಯಕರ್ತರು  ತಡೆದಿದ್ದಾರೆ. ಸಂಸದರು ಕೀಳು ಮಟ್ಟಕ್ಕೆ ಇಳಿದು ನಮ್ಮ ಕ್ಷೇತ್ರದ ಘನತೆ ಹಾಳು ಮಾಡುತ್ತಿದ್ದಾರೆ.  ಕಳೆದ ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಡಿ.ಕೆ. ಸುರೇಶ್ ಗೆಲ್ಲಲು ಬಹುಮುಖ್ಯ ಕಾರಣ ಜೆಡಿಎಸ್ ಕಾರ್ಯಕರ್ತರು. ಇಲ್ಲಿನ ಶಾಸಕರು ಏಕವಚನದಲ್ಲಿ ಮಾತನಾಡುತ್ತಾರೆ. ಅವರಿಗೆ ತಕ್ಕ ಪಾಠ ಕಲಿಸಲಾಗುವುದು ಎಂದು ತಿಳಿಸಿದರು.

ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್ ಮಾತನಾಡಿ, ಮುಂದಿನ ದಿನಗಳಲ್ಲಿ ರಾಮನಗರ ಕ್ಷೇತ್ರದ ಜನತೆಯ ಕಷ್ಟ ಕೇಳುವ ಕೆಲಸ ಮಾಡಲಾಗುವುದು .ಇಲ್ಲಿನ ಜನತೆ ಕಷ್ಟ ಕೇಳಲು ವಿಶೇಷ ಅಧಿಕಾರಿಯನ್ನು ನೇಮಿಸಲಾಗುವುದು. ಹಳ್ಳಿ ಜನ, ರೈತರ ಬಗ್ಗೆ ನಾನು ವಿಶೇಷ ಕಾಳಜಿ ಹೊಂದಿದ್ದೇನೆ. ನಾನು ಜಯದೇವದಲ್ಲಿ ಇದ್ದಷ್ಟು ದಿನ ಬಡವರ ಪರ ಕೆಲಸ ಮಾಡಿದ್ದೇನೆ. ನನ್ನ ಅವಧಿಯಲ್ಲಿ 85 ಲಕ್ಷ ಜನರಿಗೆ ಚಿಕಿತ್ಸೆ ನೀಡಿದ್ದೆನೆ ಎಂದರು.

ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಮಾತನಾಡಿ, ಕಳೆದ ಮೂರು ಚುನಾವಣೆಗಳಿಂದ ಡಿ.ಕೆ. ಸುರೇಶ್ ಸಂಸದರಾಗಿದ್ದಾರೆ. ನಾವು ಸಹಾಯ ಮಾಡಿದ್ದಕ್ಕೆ ಅವರು ಸಂಸದ ಆಗಿರೋದು. ಈ ಕ್ಷೇತ್ರವನ್ನು ದೆಹಲಿ ನಾಯಕರು ಗಮನಿಸಿದ್ದಾರೆ. ದೇಶ ವಿಭಜನೆ ಮಾಡಲು ಹೊರಟ ಸುರೇಶ್ ಅವರನ್ನು ಹೊರಗೆ ಹಾಕಬೇಕು. ಅಣ್ಣ– ತಮ್ಮಂದಿರು ಲೂಟಿ ಮಾಡಿದರು ಪರವಾಗಿಲ್ಲ ಆದರೆ ದೇಶ ವಿಭಜನಾ ಮಾಡಲು ಹೊರಟಿದ್ದಾರೆ. ನಮ್ಮ ಅಭ್ಯರ್ಥಿ ಮಂಜನಾಥ್ ಅವರ ಪರ ಜನ ಸಾಮಾನ್ಯರ ಒಲವಿದೆ ಎಂದರು.

ಮಾಜಿ ಶಾಸಕ ಮಂಜುನಾಥ್, ಬಿಜೆಪಿ ಮುಖಂಡ ಗೌತಮ್ ಗೌಡ, ಆನಂದಸ್ವಾಮಿ, ಅಕ್ಕೂರು ದೇವೇಗೌಡ, ಮುರಳೀಧರ್, ಪಿಚ್ಚನಕೆರೆ ಜಗದೀಶ್, ಕೊಳ್ಳಿಗನಹಳ್ಳಿ ರಾಮು, ಶ್ರೀನಿವಾಸ್, ಚಂದ್ರಶೇಖರ್, ಶೇಷಾದ್ರಿ ರಾಮು, ಡಿ.ಕೆ. ರಮೇಶ್, ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT