ಚನ್ನಪಟ್ಟಣ: ಕೊರೊನಾ ನಿರ್ಬಂಧದ ನಡುವೆಯೂ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಶುಕ್ರವಾರ ಪಟ್ಟಣದಲ್ಲಿ ಗುಂಪುಗೂಡಿಕೊಂಡು ನಗರಸಭಾ ಚುನಾವಣಾ ಪ್ರಚಾರ ನಡೆಸಿದ್ದು, ಟೀಕೆಗೆ ಗುರಿಯಾಗಿದೆ.
ಜವಾಬ್ದಾರಿಯುತ ಸ್ಥಾನದಲ್ಲಿರುವ ಸಿ.ಪಿ.ಯೋಗೇಶ್ವರ್ ಕೊರೊನಾ ನಿಯಮಗಳನ್ನು ಉಲ್ಲಂಘನೆ ಮಾಡಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ಸರ್ಕಾರದ ನಿಯಮಗಳನ್ನು ಇವರೇ ಉಲ್ಲಂಘನೆ ಮಾಡಿದರೆ ಸಾಮಾನ್ಯ ಸಾರ್ವಜನಿಕರು ಹೇಗೆ ಪಾಲಿಸುತ್ತಾರೆ ಎಂದು ವಿರೋಧಪಕ್ಷಗಳ ಮುಖಂಡರು ಟೀಕಿಸಿದ್ದಾರೆ.
ಸಿ.ಪಿ.ಯೋಗೇಶ್ವರ್ ಅವರು ಗುರುವಾರವೂ ಪಟ್ಟಣದಲ್ಲಿ ನಗರಸಭಾ ಚುನಾವಣಾ ಪ್ರಚಾರ ನಡೆಸಿದ್ದರು. ಜೊತೆಗೆ ಪಟ್ಟಣದ ಕುವೆಂಪುನಗರ 5ನೇ ಅಡ್ಡರಸ್ತೆಯ ತಮ್ಮ ನಿವಾಸದಲ್ಲಿ ಮುಖಂಡರ ಸಭೆ ನಡೆಸಿ ಬಿಜೆಪಿ ಬೆಂಬಲಿಸಲು ಮನವಿ ಮಾಡಿದ್ದರು. ಅಂತರ ಕಾಪಾಡುವಲ್ಲಿ ಯಾವುದೇ ನಿಯಮ ಪಾಲಿಸಿರಲಿಲ್ಲ. ಇದು ಟೀಕೆಗೆ ಗುರಿಯಾಗಿತ್ತು.
ಶುಕ್ರವಾರವೂ ಸಹ ಯೋಗೇಶ್ವರ್ ಪಟ್ಟಣದಲ್ಲಿ ಪಕ್ಷದ ಮುಖಂಡರು, ಜನರ ಗುಂಪುಗೂಡಿಕೊಂಡು ಪ್ರಚಾರ ಮಾಡಿದ್ದು, ಕೊರೊನಾ ನಿಯಮ ಉಲ್ಲಂಘಿಸಿದ್ದಾರೆ. ಮಹಿಳೆಯರು ಮಕ್ಕಳ ಮಧ್ಯೆಯಲ್ಲಿ ನಿಂತು ಪ್ರಚಾರ ನಡೆಸಿದ್ದಾರೆ ಎಂದು ಆರೋಪಕ್ಕೆ ಗುರಿಯಾಗಿದ್ದಾರೆ.
ಒಂದು ಕಡೆ ಸರ್ಕಾರ ಸಾರ್ವಜನಿಕರಿಗೆ ಕೊರೊನಾ ನಿಯಮ ಪಾಲಿಸುವಂತೆ ಸೂಚನೆ ನೀಡುತ್ತದೆ. ಪಾಲನೆ ಉಲ್ಲಂಘನೆ ಮಾಡುವವರಿಗೆ ದಂಡ ವಿಧಿಸುತ್ತದೆ. ಇಲ್ಲಿ ಸರ್ಕಾರದ ಸಚಿವರೆ ನಿಯಮ ಉಲ್ಲಂಘನೆ ಮಾಡಿದ್ದು, ಇದರ ಬಗ್ಗೆ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲವೆ ಎಂದು ವಿರೋಧ ಪಕ್ಷದ ಮುಖಂಡರು ಪ್ರಶ್ನಿಸಿದ್ದಾರೆ.