ಚನ್ನಪಟ್ಟಣ: ಸಿಂಗಾಪುರದಲ್ಲಿ ಮೇ 23ರಂದು ನಡೆಯುವ ಫಸ್ಟ್ ಏಷ್ಯನ್ ಯೋಗ ಚಾಂಪಿಯನ್ಶಿಫ್ ನಲ್ಲಿ ಭಾಗವಹಿಸಲು ತೆರಳುತ್ತಿರುವ ತಾಲ್ಲೂಕಿನ ಮತ್ತೀಕೆರೆ ಗ್ರಾಮದ ಎಂ.ಎಸ್. ದರ್ಶನ್ ಗೌಡ ಅವರಿಗೆ ಪಟ್ಟಣದ ಚನ್ನಾಂಬಿಕ ಪದವಿ ಕಾಲೇಜಿನ ಆವರಣದಲ್ಲಿ ರಾಂಪುರದ ನೇಗಿಲಯೋಗಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಸನ್ಮಾನಿಸಿ ಶುಭ ಹಾರೈಸಲಾಯಿತು.
ಅವರು ಮತ್ತೀಕೆರೆ ಗ್ರಾಮದ ಎಂ.ಆರ್. ಸುರೇಶ್ ಮತ್ತು ಕೆ.ಸಿ. ಶೋಭಾ ದಂಪತಿ ಪುತ್ರ. ಇವರು ಇಂಟರ್ ನ್ಯಾಷನಲ್ ಯೂತ್ ಯೋಗ ಫೆಡರೇಷನ್ ವತಿಯಿಂದ ಚಾಂಪಿಯನ್ಶಿಫ್ ನಲ್ಲಿ ಭಾಗವಹಿಸುತ್ತಿದ್ದಾರೆ.
ಟ್ರಸ್ಟ್ ಕಾರ್ಯದರ್ಶಿ ವಿಜಯ್ ರಾಂಪುರ ಮಾತನಾಡಿ, ಯುವಜನಾಂಗ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡರೆ ಸಾಮಾಜಿಕ ಗೌರವಕ್ಕೆ ಭಾಜನರಾಗಬಹುದು. ವಿದ್ಯಾರ್ಥಿ ದೆಸೆಯಿಂದಲೇ ಆರೋಗ್ಯಕರ ಅಭ್ಯಾಸಗಳತ್ತ ಸೆಳೆಯುವ ಕೆಲಸವಾಗಬೇಕು ಎಂದರು.
ಪ್ರತಿಭೆಯಿದ್ದಲ್ಲಿ ಪ್ರೋತ್ಸಾಹವಿರುತ್ತದೆ. ಸಾಧನೆಗೆ ಹಲವು ಮಾರ್ಗಗಳಿದ್ದು, ಕಠಿಣ ಪರಿಶ್ರಮ, ಸತತ ಅಭ್ಯಾಸ, ಶ್ರದ್ಧೆ ಮತ್ತು ಶಿಸ್ತಿನ ಜೀವನಕ್ರಮ ಅಳವಡಿಸಿಕೊಂಡು ಸಾಧಕರಾಗಬೇಕು ಎಂದರು.
ಉಪನ್ಯಾಸಕರಾದ ಎ.ಎನ್. ಲೋಕೇಶ್, ಟಿ.ಆರ್. ಸ್ವಾಮಿ, ವಸಂತ, ಎಂ.ಎಸ್. ರಮ್ಯ, ಕಲಾ, ಸುರೇಶ್, ನಾರಾಯಣಸ್ವಾಮಿ, ಅಮ್ರೀನ್ ಸುಲ್ತಾನ, ಶಾಹಿಸ್ತಾ ಖಾನಂ ಹಾಗೂ ಟ್ರಸ್ಟ್ ಪದಾಧಿಕಾರಿಗಳು ಹಾಜರಿದ್ದರು.