ಮರಳವಾಡಿ (ಕನಕಪುರ): ತಾಲ್ಲೂಕಿನ ಮರಳವಾಡಿ ಹೋಬಳಿ ವ್ಯಾಪ್ತಿಯ ಪಡುವಣಗೆರೆ ಹಾಗೂ ಟಿ.ಹೊಸಳ್ಳಿ ರಸ್ತೆ ಅಭಿವೃದ್ಧಿಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಬೆಂಗಳೂರು ರಸ್ತೆಯ ಹಾರೋಹಳ್ಳಿ ಮಂಜುನಾಥ ಕಲ್ಯಾಣ ಮಂಟಪದ ರಸ್ತೆಯಿಂದ ಪಡುವಣಗೆರೆವರೆಗೆ ಮತ್ತು ಪಡುವಣಗೆರೆ ಅಡ್ಡರಸ್ತೆಯಿಂದ ಪಡುವಣಗೆರೆ ಮುರಡಿ ಬಸವೇಶ್ವರ ದೇವಸ್ಥಾನದವರೆಗೆ ಸುಮಾರು ₹ 7 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಪಡಿಸಲು ಟೆಂಡರ್ ನೀಡಲಾಗಿದೆ.
ಒಂದೂವರೆ ತಿಂಗಳ ಹಿಂದೆ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಹಾರೋಹಳ್ಳಿ ಮತ್ತು ಮರಳವಾಡಿ ಹೋಬಳಿಗಳಿಗೆ ಬಂದು ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದರು.
ಗುತ್ತಿಗೆದಾರರು ಶೀಘ್ರವೇ ಕೆಲಸ ಪ್ರಾರಂಭಿಸುವುದಾಗಿ ಹೇಳಿ ಮೊದಲು ಇದ್ದಂತ ಡಾಂಬರ್ ರಸ್ತೆಯನ್ನು ಜೆಸಿಬಿಯಿಂದ ಅಗೆದು ರಸ್ತೆಗಳಿಗೆ ಜಲ್ಲಿ ಹಾಸಿ ಹೋದವರು ಒಂದೂವರೆ ತಿಂಗಳಾದರೂ ಈ ಕಡೆ ಬಂದಿಲ್ಲವೆಂದು. ಈಗ ಬಸ್ ಸಂಚಾರವೂ ಸ್ಥಗಿತಗೊಂಡಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.