ಕನಕಪುರ: ಬಲಿಜ ಸಮುದಾಯವನ್ನು 2ಎ ಮೀಸಲಾತಿಗೆ ಸೇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಷ್ಟ ಇಲ್ಲ ಎಂದು ಕರ್ನಾಟಕ ರಾಜ್ಯ ಬಲಿಜ ಸಂಘದ ಸಂಸ್ಥಾಪಕ ಅಧ್ಯಕ್ಷ ಡಾ.ಟಿ.ವೇಣುಗೋಪಾಲ್ ಆರೋಪಿಸಿದರು.
ನಗರದಲ್ಲಿ ತಾಲ್ಲೂಕು ಬಲಿಜ ಸಂಘದ ವತಿಯಿಂದ ಬುಧವಾರ ನಡೆದ ಸಾವಿತ್ರಿಬಾಯಿ ಫುಲೆ ಜನ್ಮದಿನ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟನೆ ಮಾತನಾಡಿದರು.
ವೀರಪ್ಪ ಮೊಯಿಲಿ ಅವರು ಮುಖ್ಯಮಂತ್ರಿ ಆಗಿದ್ದಾಗ 2ಎ ಮೀಸಲಾತಿಯಲ್ಲಿ ಇದ್ದ ಸಮುದಾಯವನ್ನು 3ಎ ಮೀಸಲಾತಿ ನೀಡಿ ಸಾಮಾಜಿಕ ಮತ್ತು ಶೈಕ್ಷಣಿವಾಗಿ ಅನ್ಯಾಯ ಮಾಡಿದರು. ಸಿದ್ದರಾಮಯ್ಯ ಸರ್ಕಾರದಲ್ಲಿ ಹೋರಾಟಕ್ಕೆ ಮಾನ್ಯತೆಯನ್ನೇ ನೀಡಿಲ್ಲ ಎಂದು ದೂರಿದರು.
ಮೀಸಲಾತಿಯಲ್ಲಿ ಆಗಿರುವ ಮೋಸ ಸರಿಪಡಿಸಿ 2ಎ ಮೀಸಲಾಗಿ ಸಿಗಬೇಕೆಂದು ರಾಜ್ಯಾದ್ಯಂತ ಹೋರಾಟ ನಡೆಸುತ್ತಿದ್ದು ಇದಕ್ಕೆ ಸಮುದಾಯದ ಜನರು ಪಕ್ಷಭೇದ ಮರೆತು ಹೋರಾಟಕ್ಕೆ ಕೈ ಜೋಡಿಸಬೇಕು. ಕನಕಪುರ ಕ್ಷೇತ್ರದವರೇ ಉಪಮುಖ್ಯಮಂತ್ರಿ ಇದ್ದು ಸಮುದಾಯಕ್ಕೆ ನ್ಯಾಯ ಸಿಗುವಂತೆ ಮಾಡಬೇಕೆಂದು ಮನವಿ ಮಾಡಿದರು.
40ಸಾವಿರ ಮತದಾರರಿರುವ ಕನಕಪುರ ತಾಲ್ಲೂಕಿನಲ್ಲಿ ಇನ್ನೂ ಸಮುದಾಯ ಭವನ ಇಲ್ಲ ಎನ್ನುವುದು ನೋವಿನ ಸಂಗತಿ ಎಂದರು.
ಸಮುದಾಯದಲ್ಲಿ ಆರ್ಥಿಕವಾಗಿ ಹಿಂದುಳಿದವರು ನಡೆಸುವ ವಿವಾಹ ಸೇರಿದಂತೆ ಶುಭ ಸಮಾರಂಭಗಳಿಗೆ ಸಮುದಾಯ ಭವನ ಉಚಿತವಾಗಿ ನೀಡಬೇಕು. ಶೈಕ್ಷಣಿಕವಾಗಿ ಅವಶ್ಯ ಇರುವ ಮಕ್ಕಳಿಗೆ ಪ್ರೋತ್ಸಾಹಿಸಬೇಕು ಎಂದರು.
ತಾಲ್ಲೂಕು ಬಲಿಜ ಸಂಘದ ಗೌರವ ಅಧ್ಯಕ್ಷ ಗುಂಡಣ್ಣ ಮಾತನಾಡಿ, ಸಾವಿತ್ರಿ ಬಾಯಿ ಫುಲೆ ದೇಶದ ಮೊಟ್ಟ ಮೊದಲ ಮಹಿಳಾ ಶಿಕ್ಷಕಿಯಾಗಿ ಎಲ್ಲ ಸಮುದಾಯದ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತುಕೊಟ್ಟು ಸಾಧಕಿ ಎಂದು ಹೇಳಿದರು.
ಸಂಘದ ಅಧ್ಯಕ್ಷ ಬಾಲರಾಜು ಮಾತನಾಡಿ, ಸಮುದಾಯದ ಸಂಘಟನೆಗೆ ಹಿರಿಯ ಮುಖಂಡರು ಕೈಗೊಂಡಿರುವ ಎಲ್ಲ ಪ್ರಯತ್ನ ಮತ್ತು ಹೋರಟಕ್ಕೆ ಕೈಜೋಡಿಸಬೇಕಾಗಿದೆ ಎಂದರು.
ಕರ್ನಾಟಕ ರಾಜ್ಯ ಸಮಗ್ರ ಬಲಿಜ ವೇದಿಕೆ ಅಧ್ಯಕ್ಷ ಮುನಿಕೃಷ್ಣ, ಉದ್ಯಮಿ ಲಕ್ಷ್ಮಿಕಾಂತ (ಕಾಂತಣ್ಣ) ಸೇರಿದಂತೆ ಕನಕಪುರ ತಾಲ್ಲೂಕು ಬಲಿಜ ಸಂಘದ ಎಲ್ಲಾ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಎಸ್ಎಸ್ಎಲ್ಸಿ ಮತ್ತು ಪಿಯುನಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.