ರಾಮನಗರ: ತಾಲ್ಲೂಕಿನ ಕೈಲಾಂಚ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಶುಕ್ರವಾರ ಆನೆಗಳ ಹಿಂಡು ದಾಳಿ ನಡೆಸಿ ಬೆಳೆಗಳನ್ನು ನಾಶ ಮಾಡಿದೆ.
ವಿಭೂತಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಮ್ಮಯ್ಯದದೊಡ್ಡಿ ಸುತ್ತಲಿನ ಜಮೀನುಗಳಿಗೆ ಲಗ್ಗೆ ಇಟ್ಟ ಆನೆಗಳು ಚಿನ್ನಗಿರಿ ಕೃಷ್ಣ ಎಂಬುವರ ಒಂದು ಎಕರೆ ಜಮೀನಿನಲ್ಲಿ ಬೆಳೆದಿದ್ದ ಟೊಮೆಟೊ ಬೆಳೆಯನ್ನು ನಾಶ ಮಾಡಿವೆ.
ಚಂದ್ರಪ್ಪ ಅವರ ಜಮೀನಿನಲ್ಲಿನ ಹಾಗಲಕಾಯಿ ಹಾಗೂ ವೆಂಕಟಪ್ಪ ಅವರ ಜಮೀನಿನಲ್ಲಿನ ಈರೇಕಾಯಿ ಬೆಳೆಯೂ ಆನೆಗಳ ಪಾಲಾಗಿದೆ. ಚಿಕ್ಕಣ್ಣ ವೆಂಕಟಪ್ಪ ಅವರ ಜಮೀನಿನಲ್ಲಿನ ಟೊಮೆಟೊ, ತೆಂಗಿನ ಸಸಿಗಳು, ಸುತ್ತಲಿನ ಜಮೀನುಗಳಲ್ಲಿನ ಪಪ್ಪಾಯ ಬೆಳೆಯೂ ನಾಶವಾಗಿದೆ. ಇದರಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಚನ್ನಪಟ್ಟಣದ ದೊಡ್ಡನಹಳ್ಳಿ ಹಾಗೂ ರಾಮನಗರ ತಾಲ್ಲೂಕಿನ ಕೈಲಾಂಚ ಹೋಬಳಿಯಲ್ಲಿನ ವಿವಿಧ ಗ್ರಾಮಗಳಲ್ಲಿ ಮೂರು ಆನೆಗಳ ಹಿಂಡು ಶುಕ್ರವಾರ ದಾಳಿ ನಡೆಸಿದೆ. ಸದ್ಯ ಕಾಡನಕುಪ್ಪೆ ಬಳಿ ಈ ಆನೆಗಳು ಇವೆ. ಇವುಗಳನ್ನು ಕಾಡಿಗೆ ಕಳುಹಿಸುವ ಪ್ರಯತ್ನ ನಡೆದಿದೆ ಎಂದು ವಲಯ ಅರಣ್ಯಧಿಕಾರಿ ಕಿರಣ್ ತಿಳಿಸಿದರು.