ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಕರ್ಯ ನಿರ್ಮಾಣಕ್ಕೆ ಒತ್ತು

47 ಅಂಗವಿಕಲರಿಗೆ ತ್ರಿಚಕ್ರ ವಾಹನ: ಸಂಪೂರ್ಣ ಅನುದಾನ ಬಳಕೆ
Last Updated 3 ಅಕ್ಟೋಬರ್ 2021, 5:23 IST
ಅಕ್ಷರ ಗಾತ್ರ

ರಾಮನಗರ: ಮಾಗಡಿ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಎ. ಮಂಜುನಾಥ್ ತಮ್ಮ ಅಧಿಕಾರಾವಧಿಯ ಮೂರೂವರೆ ವರ್ಷದಲ್ಲಿ ರಸ್ತೆ, ಕಟ್ಟಡ ನಿರ್ಮಾಣ ಸೇರಿದಂತೆ ಮೂಲಸೌಕರ್ಯಗಳಿಗೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯನ್ನು ಹೆಚ್ಚು ವಿನಿಯೋಗಿಸಿದ್ದಾರೆ.

ಈ ಅವಧಿಯಲ್ಲಿ ಒಟ್ಟಾರೆ 142 ಕಾಮಗಾರಿಗಳಿಗೆ ಅವರು ಶಿಫಾರಸು ಮಾಡಿದ್ದಾರೆ. ಈ ಪೈಕಿ 29 ಕಾಮಗಾರಿಗಳು ಪೂರ್ಣಗೊಂಡಿದ್ದು, 84 ಪ್ರಗತಿಯಲ್ಲಿವೆ. ಇನ್ನೂ 29 ಕಾಮಗಾರಿಗಳಿಗೆ ಅಂದಾಜು ಪಟ್ಟಿ ಸಲ್ಲಿಕೆ ಆಗಬೇಕಿದೆ. ನಾಲ್ಕು ವರ್ಷದಲ್ಲಿ 47 ಅಂಗವಿಕಲ ಫಲಾನುಭವಿಗಳಿಗೆ ತ್ರಿಚಕ್ರವಾಹನಕ್ಕೆ ಹಣ ತೆಗೆದಿರಿಸಿರುವುದು ಗಮನ ಸೆಳೆಯುವ ಅಂಶ. ತಲಾ ₹ 90 ಸಾವಿರ ಹಣವನ್ನು ಇದಕ್ಕಾಗಿ ಮೀಸಲಿಡಲಾಗಿದ್ದು, ಈ ಅಂಗವಿಕಲರಿಗೆ ಇನ್ನಷ್ಟೇ ವಾಹನಗಳುಕೈಸೇರಬೇಕಿದೆ.

ಬರೋಬ್ಬರಿ 30 ರಸ್ತೆ ಕಾಮಗಾರಿಗಳಿಗೆ ಶಾಸಕರು ಶಿಫಾರಸು ಮಾಡಿದ್ದು, ಸಿಮೆಂಟ್ ಕಾಂಕ್ರಿಟ್ ರಸ್ತೆಗಳ ನಿರ್ಮಾಣಕ್ಕೆ ಒತ್ತು ನೀಡಿದ್ದಾರೆ. ₹ 2 ಲಕ್ಷದಿಂದ ₹ 5 ಲಕ್ಷದವರೆಗೆ ಅನುದಾನ ಹಂಚಿಕೆ ಮಾಡಿದ್ದಾರೆ. ಡೇರಿಗಳು, ಸಮುದಾಯ ಭವನವೂ ಸೇರಿದಂತೆ ಒಟ್ಟು 18 ಕಟ್ಟಡ ಕಾಮಗಾರಿಗಳಿಗೆ ಅನುದಾನ ದೊರೆತಿದೆ. ಮಾಗಡಿ ತಾ.ಪಂ ಕಚೇರಿಯ ಕೊಠಡಿ ದುರಸ್ತಿ ಕಾಮಗಾರಿಗೆ ₹ 10 ಲಕ್ಷ ನೀಡಲಾಗಿದೆ.

ಹೈನುಗಾರಿಕೆಗೆ ಪ್ರೋತ್ಸಾಹ ನೀಡುವ ಸಲುವಾಗಿ ಕ್ಷೇತ್ರದ ವ್ಯಾಪ್ತಿಯ 11 ಹಾಲು ಉತ್ಪಾದಕರ ಸಂಘಗಳಿಗೆ ಹಣ ನೀಡಲಾಗಿದೆ. ಮಾದಿಗೊಂಡನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಮೇಗಲಪಾಳ್ಯ ಡೇರಿ ಕಟ್ಟಡಕ್ಕೆ ನೀಡಲಾದ ₹ 4 ಲಕ್ಷ ಸಹ ಇದರಲ್ಲಿ ಸೇರಿದೆ.

ನೀರಿನ ಘಟಕ ನಿರ್ಮಾಣ: ಏಳು ಶುದ್ಧ ನೀರು ಘಟಕಗಳ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ ಅನುದಾನ ಹಂಚಿಕೆಯಾಗಿದೆ. ಮಾಡಬಾಳ್‌ ಹೋಬಳಿಯ ಅಜ್ಜಹಳ್ಳಿಯಲ್ಲಿ ನೀರಿನ ಘಟಕ ನಿರ್ಮಾಣಕ್ಕೆ ₹ 12 ಲಕ್ಷ ನೀಡಲಾಗಿದೆ.

ದೇಗುಲಗಳಿಗೆ ಸೌಕರ್ಯ: ದೇಗುಲಗಳ ವ್ಯಾಪ್ತಿಯಲ್ಲಿ ಮೂಲಸೌಕರ್ಯದ ಕಡೆಗೂ ಶಾಸಕರು ಗಮನ ಹರಿಸಿದ್ದು, ಒಟ್ಟು 6 ದೇವಾಲಯಗಳಿಗೆ ಸಹಾಯಹಸ್ತ ಚಾಚಿದ್ದಾರೆ. ಕೇತಗಾನಹಳ್ಳಿಯ ಕಗ್ಗಲ್ಲು ಬೀರೇಶ್ವರಸ್ವಾಮಿ ದೇಗುಲದ ಸಮುದಾಯ ಭವನಕ್ಕೆ ನಿರ್ಮಾಣಕ್ಕೆ ₹ 10 ಲಕ್ಷ ನೀಡಿರುವುದು ಇದರಲ್ಲಿ ಸೇರಿದೆ.

ಐದು ಶಾಲೆ–ಕಾಲೇಜುಗಳ ಕಾಮಗಾರಿಗಳಿಗೆ ಈ ನಿಧಿಯಿಂದ ಅನುದಾನ ಸಂದಾಯ ಆಗಿದೆ. ಮಾಗಡಿ ಸರ್ಕಾರಿ ಪ್ರಥಮದರ್ಜೆ ಕಾಲೇಜು ಕಟ್ಟಡ ನವೀಕರಣಕ್ಕೆ ₹ 10 ಲಕ್ಷ, ಬೈರಮಂಗಲ ಗ್ರಾಮದ ವೃಷಭಾವತಿ ಪ್ರೌಢಶಾಲೆಯಲ್ಲಿ ಶಾಲಾ ಕೊಠಡಿ ನಿರ್ಮಾಣಕ್ಕೆ ₹ 10 ಲಕ್ಷ ನೀಡಲಾಗಿದೆ.

ಉಳಿದಂತೆ ವೃಷಭಾವತಿ ಪುರ ಹತ್ತಿರ ಬೈರಮಂಗಲ–ಹಾರೋಹಳ್ಳಿ ರಸ್ತೆಯಲ್ಲಿ ಬಸ್ ತಂಗುದಾಣ ನಿರ್ಮಾಣಕ್ಕೆ ₹ 25 ಲಕ್ಷ ಸೇರಿದಂತೆ ಎರಡು ತಂಗುದಾಣಗಳ ನಿರ್ಮಾಣಕ್ಕೆ ಹಣ ಮೀಸಲಾಗಿದೆ. ತಲಾ ₹ 4.99 ಲಕ್ಷ ವೆಚ್ಚದಲ್ಲಿ ಒಟ್ಟು 17 ಕಡೆಗಳಲ್ಲಿ ಹೈಮಾಸ್ಟ್ ದೀಪಗಳ ಅಳವಡಿಕೆಗೆ ನೆರವು ಸಿಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT