ರಾಮನಗರ: ಜಾನಪದ ಕಲೆಗಳು ಸಂಸ್ಕೃತಿಯ ಪ್ರತೀಕ. ಅಭಿವೃದ್ಧಿಶೀಲ ರಾಷ್ಟ್ರಗಳು ಆಧುನಿಕತೆಯ ಮೊರೆ ಹೋಗಿ ನಶಿಸಿ ಹೋಗುತ್ತಿರುವ ಈ ಕಲೆಯನ್ನು ಉಳಿಸಿ ಪ್ರೋತ್ಸಾಹಿಸಬೇಕು ಎಂದು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಪ್ರೊ. ಹಿ.ಶಿ. ರಾಮಚಂದ್ರಗೌಡ ತಿಳಿಸಿದರು.
ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಜಾನಪದ ಲೋಕದಲ್ಲಿ ನಡೆದ ಲೋಕಸಿರಿ-77 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅನಾದಿ ಕಾಲದಿಂದಲೂ ಬಂದಂತಹ ಗ್ರಾಮೀಣ ಭಾರತದ ಜೀವನಾಡಿ ಕಲೆಯೇ ಜಾನಪದ. ಶತಮಾನಗಳಿಂದ ಬೆಳೆದು ಬಂದ ಈ ಕಲೆ ಮಾನವನ ಜೀವನದಲ್ಲಿ ಹಾಸು ಹೊಕ್ಕಾಗಿದೆ. ಅಂತಹ ಜಾನಪದ ಕಲೆಗಾರರನ್ನು ಕಲೆಯನ್ನು ಗುರುತಿಸಿ ಸನ್ಮಾನಿಸುವುದು ಶ್ಲಾಘನೀಯ ಎಂದರು.
ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶೋಭಾ ವಸಂತಕುಮಾರ್ ಮಾತನಾಡಿ, ಜಾನಪದ ಬಾಯಿಂದ ಬಾಯಿಗೆ ಅನುಕರಣೆಯಿಂದ ಬಂದಿದ್ದು, ನಮ್ಮ ಹಿರಿಯರು ನಮಗೆ ಕೊಟ್ಟಿರುವ ಕೊಡುಗೆಯನ್ನು ಉಳಿಸಿ ಬೆಳೆಸೋಣ ಎಂದರು.
ಕೂನಗಲ್ ಸರ್ಕಾರಿ ಪದವಿ ಪೂರ್ವ ಕಾಲೇಜು ಇಂಗ್ಲಿಷ್ ಉಪನ್ಯಾಸಕಿ ಆರ್ಷಿಯಾ ಮಾತನಾಡಿದರು. ಇದೇ ಸಂದರ್ಭದಲ್ಲಿ ಹಚ್ಚೆ ಮತ್ತು ಸೋಬಾನೆ ಕಲಾವಿದೆ ಚಿಕ್ಕತಾಯಮ್ಮ ಅವರಿಗೆ ನಾಡೋಜ ಎಚ್. ಎಲ್ ನಾಗೇಗೌಡರ ನೆನಪಿನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜಾನಪದ ಲೋಕದ ಕ್ಯುರೇಟರ್ ಯು.ಎಂ. ರವಿ ಚಿಕ್ಕತಾಯಮ್ಮ ಅವರೊಂದಿಗೆ ಸಂವಾದ ನಡೆಸಿಕೊಟ್ಟರು.
ಹಚ್ಚೆ ಮತ್ತು ಸೋಬಾನೆ ಕಲಾವಿದೆ ಚಿಕ್ಕತಾಯಮ್ಮ ಅವರಿಗೆ ನಾಡೋಜ ಎಚ್. ಎಲ್ ನಾಗೇಗೌಡರ ನೆನಪಿನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜಾನಪದ ಪರಿಷತ್ತು ಅಧ್ಯಕ್ಷ ಹಿ.ಶಿ. ರಾಮಚಂದ್ರೇಗೌಡ, ಸಬ್ ಇನ್ಸ್ಪೆಕ್ಟರ್ ಶೋಭಾ, ಉಪನ್ಯಾಸಕಿ ಆರ್ಷಿಯಾ ಹಾಗೂ ಯು.ಎಂ. ರವಿ ಇದ್ದರು