ಚನ್ನಪಟ್ಟಣ: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಗುಡಿಸರಗೂರು ಗ್ರಾಮದ ಬಸವೇಶ್ವರ ಕೊಂಡ ಮಹೋತ್ಸವ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು.
ಬೆಳಗಿನ ಜಾವ ಕಳಶ ಹೊತ್ತ ಅರ್ಚಕರು ಕೊಂಡ ಪ್ರವೇಶಿಸುತ್ತಿದ್ದಂತೆಯೆ ಜಯಘೋಷ ಮೊಳಗಿದವು. ಕಳಶ ಹೊತ್ತ ಅರ್ಚಕರು ಬರಿಗಾಲಲ್ಲಿ ಕೆಂಡದ ಮೇಲೆ ನಡೆದರು. ಸುತ್ತಮುತ್ತಲ ಹಳ್ಳಿಗಳ ಹತ್ತು ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.
ಕೊಂಡದ ಅಂಗವಾಗಿ ಸೋಮವಾರ ಬೆಳಿಗ್ಗೆಯಿಂದಲೇ ದೇವಾಲಯದಲ್ಲಿ ವಿಶೇಷ ಪೂಜೆ ನಡೆದವು. ಸೋಮವಾರ ಸಂಜೆ ಕೊಂಡಕ್ಕೆ ಹಾಕಿದ ಸೌದೆಗೆ ಬೆಂಕಿ ಹಚ್ಚಿ ಮಂಗಳವಾರ ಬೆಳಿಗ್ಗೆ ಕೊಂಡ ಹಾಯಲಾಗುತ್ತದೆ.
ಕೊಂಡಕ್ಕೆ ತಾಲ್ಲೂಕಿನಲ್ಲಷ್ಟೇ ಅಲ್ಲದೆ ನೆರೆಯ ಜಿಲ್ಲೆಯ ಜನರು ಸೌದೆ ಕಾಣಿಕೆ ಕೊಡುವುದು ವಾಡಿಕೆ. ಭಾನುವಾರದಿಂದಲೇ ಭಕ್ತರು ಸೌದೆ ತಂದರು. 20 ಅಡಿ ಎತ್ತರಕ್ಕೆ ಸೌದೆ ಹಾಕಲಾಗಿತ್ತು.
ಜನರು ತಮ್ಮ ರಾಸುಗಳ ಒಳತಿಗಾಗಿ ಹರಕೆ ಹೊರುವುದು ಇಲ್ಲಿಯ ಮತ್ತೊಂದು ವಿಶೇಷ. ರಾಸುಗಳಿಗೆ ಕೆಡಕು ಉಂಟಾದಾಗ ಬಸವೇಶ್ವರನನ್ನು ನೆನೆದು ಕೊಂಡಕ್ಕೆ ಹರಳು, ಸೌದೆ ಹಾಕುತ್ತೇನೆ ಎಂದು ಹರಕೆ ಹೊರುತ್ತಾರೆ. ರಾಸುಗಳು ಗುಣಮುಖವಾದ ನಂತರ ಉತ್ಸವದ ದಿನ ಇಲ್ಲಿಗೆ ಬಂದು ಹರಕೆ ತೀರಿಸುತ್ತಾರೆ.
ಸೋಮವಾರ ದಿನಪೂರ್ತಿ ವಿವಿಧ ಗ್ರಾಮಗಳಿಂದ ಬಂದ ಜಾನಪದ ಕಲಾವಿದರಿಂದ ಕೋಲಾಟ, ಕೀಲು ಕುದುರೆ, ತಮಟೆ ಕುಣಿತ, ಒನಕೆ ಕುಣಿತ ನಡೆದವು.
ಮಂಗಳವಾರ ಹರಕೆ ಹೊತ್ತ ಭಕ್ತಾದಿಗಳಿಗೆ ಬಾಯಿಬೀಗ ಹಾಕುವುದು, ಪಾನಕದ ಬಂಡಿ ಉತ್ಸವ, ರಥೋತ್ಸವ, ಜಾತ್ರಾ ಮಹೋತ್ಸವ, ಸಂಜೆ ಚಿಕ್ಕಬೋರೇಗೌಡನದೊಡ್ಡಿ ಗ್ರಾಮಸ್ಥರಿಂದ ತೆಪ್ಪೋತ್ಸವ ನಡೆಯಿತು.