ಬೆಳಿಗ್ಗೆ 10ಕ್ಕೆ ಸರಿಯಾಗಿ ಕಾರ್ಯಕ್ರಮ ಆರಂಭಗೊಂಡಿದ್ದು, ಒಂದು ಗಂಟೆ ಕಾಲ ಸತತವಾಗಿ ಕರೆಗಳು ಬಂದವು. ದೂರವಾಣಿ ಮೂಲಕವೇ ಜನರ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ, ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಭರವಸೆ ನೀಡಿದರು. ಪೋಡಿ ತಿದ್ದುಪಡಿ, ಇ-ಖಾತೆ, ರಸ್ತೆ ವಿಸ್ತರಣೆ, ಕಸ ನಿರ್ವಹಣೆ, ಸರ್ಕಾರಿ ಜಾಗಗಳ ಒತ್ತುವರಿ, ಪಿಂಚಣಿ ಯೋಜನೆಗಳಲ್ಲಿನ ಅವ್ಯವಸ್ಥೆ, ಸರ್ಕಾರಿ ಕಚೇರಿಗಳಲ್ಲಿನ ಭ್ರಷ್ಟಾಚಾರ ಮೊದಲಾದ ಸಮಸ್ಯೆಗಳ ಕುರಿತು ಜನರು ದೂರಿದರು. ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ಜೊತೆ ಸಭೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು.