ಹಾರೋಹಳ್ಳಿ: ತಾಲ್ಲೂಕಿನ ತಾಮಸಂದ್ರ ಗ್ರಾಮದಲ್ಲಿ ಇತ್ತೀಚಿಗೆ ಮಳೆಯಿಂದ ಕುಸಿದ ಮನೆಯಲ್ಲೇ ವೃದ್ಧ ದಂಪತಿ ಮತ್ತು ಅವರ ಮೊಮ್ಮಗ ಅಂಗವಿಕಲ ಬಾಲಕನೊಂದಿಗೆ ವಾಸಿಸುತ್ತಿದ್ದಾರೆ.
ತಾಮಸಂದ್ರ ನಿವಾಸಿಗಳದ ಕುಂಬಯ್ಯ ಮತ್ತು ತೆರಮ್ಮ ದಂಪತಿ ತಮ್ಮ ಮಾತು ಬಾರದ ಮಗನ ಜೊತೆಗೆ ವಾಸಿಸುತ್ತಿದ್ದು, ಜೀವನಕ್ಕಾಗಿ ಸರ್ಕಾರದ ಪಿಂಚಣಿಯನ್ನೇ ನೆಚ್ಚಿಕೊಂಡಿದ್ದಾರೆ. ದಂಪತಿಯ ಮಗಳು ಮತ್ತು ಅಳಿಯ ಇಬ್ಬರೂ ಮರಣ ಹೊಂದಿದ್ದು, ಇವರ ಅಂಗವಿಕಲ ಮಗನನ್ನು ಸಾಕುವ ಜವಾಬ್ದಾರಿ ವೃದ್ಧ ದಂಪತಿಯ ಹೆಗಲೇರಿದೆ.
14 ವರ್ಷಗಳಿಂದಲೂ ಮೊಮ್ಮಗನನ್ನು ಸಾಕುತ್ತಿರುವ ವೃದ್ಧದಂಪತಿ ನಿತ್ಯವೂ ಪಡುವ ಕಷ್ಟ ಅಷ್ಟಿಷ್ಟಲ್ಲ. ಮೊಮ್ಮಗನ ನಿತ್ಯಕರ್ಮಗಳನ್ನು ಮುಗಿಸಿ, ಶಾಲೆಗೆ ಕರೆದೊಯ್ದು ವಾಪಸ್ ಕರೆತರುವುದು, ಊಟ ಸೇರಿದಂತೆ ಎಲ್ಲ ಕೆಲಸಗಳನ್ನೂ ದಂಪತಿಯೇ ಮಾಡಬೇಕಿದೆ.
ಕೆಲ ದಿನಗಳ ಹಿಂದೆ ಗ್ರಾಮದಲ್ಲಿ ಬಿದ್ದ ಬಾರಿ ಮಳೆಗಾಳಿಗೆ ಮನೆಯ ಮಧ್ಯದ ಗೋಡೆ ಕುಸಿದಿದೆ. ಕುಸಿದಿರುವ ಮನೆಯಲ್ಲೇ ನಿತ್ಯವೂ ಜೀವ ಭಯದಲ್ಲಿ ಅಜ್ಜ–ಅಜ್ಜಿ ಮತ್ತು ಮೊಮ್ಮಗ ಮಲಗುತ್ತಿದ್ದಾರೆ.
ತಾಮಸಂದ್ರ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಯೋಗೇಶ್ವರಿ ಅವರು ಅಂಗವಿಕಲ ಬಾಲಕನಿಗೆ ಪಿಸಿಯೊಥೆರಪಿ ಮಾಡಿಸಲು ಹಾಗೂ ಅಂಗವಿಕಲ ಪಿಂಚಣಿಗೆ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ನಿತ್ಯವೂ ಶಾಲಾ ಸಮಯದಲ್ಲಿ ಬಾಲಕನ ಆರೈಕೆ ಮಾಡುತ್ತಿದ್ದಾರೆ.
ಕುಸಿದಿರುವ ಮನೆಯ ನಿರ್ಮಾಣಕ್ಕೆ ದಂಪತಿ ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.