ರಾಮನಗರ: ಜಿಲ್ಲೆಯ ಐದನೇ ತಾಲ್ಲೂಕಾಗಿ ಹಾರೋಹಳ್ಳಿಯು ಮಂಗಳವಾರ ಅಧಿಕೃತವಾಗಿ ಉದ್ಘಾಟನೆಗೊಂಡಿತು.
ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ನೂತನ ತಾಲ್ಲೂಕಿಗೆ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಸಚಿವರು, ರಾಮನಗರ ಜಿಲ್ಲೆಯಾಗಿ ಎರಡು ದಶಕವಾದರೂ ಅಭಿವೃದ್ಧಿ ಕಂಡಿರಲಿಲ್ಲ. ಬಿಜೆಪಿ ಸರ್ಕಾರ ಎಲ್ಲವನ್ನೂ ಹಂತಹಂತವಾಗಿ ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದೆ. ನೂತನ ತಾಲ್ಲೂಕು ಕೇಂದ್ರಕ್ಕೆ ಅಗತ್ಯವಾದ ಮೂಲ ಸೌಕರ್ಯ ಒದಗಿಸಲಾಗುವುದು ಎಂದರು.
ಅನಿತಾ ಅಸಮಾಧಾನ:
ಕಾರ್ಯಕ್ರಮದಲ್ಲಿ ತಮ್ಮನ್ನು ಕಡೆಗಣಿಸಲಾಗಿದೆ. ನಾನು ಬರುವ ಮುಂಚೆಯೇ ಉದ್ಘಾಟನೆ ನೆರವೇರಿಸಿದ್ದಾರೆ. ನಾನು ಮಾತನಾಡುವ ಮುಂಚೆಯೇ ತೆರಳಿದ್ದಾರೆ ಎಂದು ಅಧ್ಯಕ್ಷತೆ ವಹಿಸಿದ್ದ ಅನಿತಾ ಕುಮಾರಸ್ವಾಮಿ ವೇದಿಕೆಯಲ್ಲೇ ಅಸಮಾಧಾನ ವ್ಯಕ್ತಪಡಿಸಿದರು.
ಇಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಾಡಿದ್ದು ಯಾರು? ನಮ್ಮ ಸರ್ಕಾರ ಬಂದ ಮೇಲೆ ಆಯ್ತು ಎಂದು ಬರೀ ಬುರುಡೆ ಬಿಡೋದಷ್ಟೇ ಇವರ ಕೆಲಸ. ಕುಮಾರಸ್ವಾಮಿ ಬಂದಿದ್ದರೆ ಇವರಿಗೆ ಮಾತನಾಡಲು ಆಗುತ್ತಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೇಷ್ಮೆ ಅಭಿವೃದ್ಧಿ ಕೈಗಾರಿಕೆಗಳ ನಿಗಮದ ಅಧ್ಯಕ್ಷ ಗೌತಮ್ ಗೌಡ, ಜಿಲ್ಲಾಧಿಕಾರಿ ಅವಿನಾಶ ಮೆನನ್, ಜಿ.ಪಂ. ಸಿಇಒ ದಿಗ್ವಿಜಯ್ ಬೋಡ್ಕೆ, ಎಸ್ಪಿ ಕಾರ್ತೀಕ್ ರೆಡ್ಡಿ ಮತ್ತಿತರರು ಇದ್ದರು.