ರಾಮನಗರ: ರಾಜ್ಯ ಸರ್ಕಾರ ವರ್ಗಾವಣೆ ದಂದೆ ನಡೆಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದು, ‘ರಾಮನಗರದ ಉಪ ವಿಭಾಗಾಧಿಕಾರಿ ನನಗೆ 3 ಕೋಟಿ
ರೂಪಾಯಿ ಮೊತ್ತದ ಆಮಿಷ ಒಡ್ಡಿದ್ದರು’ ಎಂದು ಆರೋಪಿಸಿದರು.
ನಗರದಲ್ಲಿ ಸೋಮವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು ‘ ಈ ಉಪ ವಿಭಾಗಾಧಿಕಾರಿ ಯಾರು ಯಾರಿಗೆ ಎಷ್ಟೆಷ್ಟು ಕಮಿಷನ್ ಕೊಟ್ಟಿದ್ದಾರೆ ಗೊತ್ತಿದೆ’ ಎಂದು ವ್ಯಂಗ್ಯವಾಡಿದರು. ‘ಇಲ್ಲಿನ ಎ.ಸಿ.ಯನ್ನು
ತೆಗೆಯಬೇಕು ಎಂದು ನಿರ್ಧಾರ ಮಾಡಿದ್ದೆ. ಮುಖ್ಯಮಂತ್ರಿ ಸಹ ಆದೇಶ ಮಾಡಿದ್ದರು. ನಂತರದಲ್ಲಿ ಏನೇನು ಆಟ ನಡೆಯಿತು ಎಂಬುದು ಗೊತ್ತಿದೆ. ಇಂತಹ ಅಧಿಕಾರಿಗಳು ಏಜೆಂಟರ ಮೂಲಕ ಹಣ ಕೊಟ್ಟು ಅದನ್ನು
ಜನರ ಜೇಬಿಗೆ ಕೈ ಹಾಕಿ ವಸೂಲಿ ಮಾಡಬೇಕಾಗುತ್ತದೆ. ಸರ್ಕಾರಕ್ಕೆ ಮರ್ಯಾದೆ ಇದ್ದರೆ ಇಂತಹ ಅಧಿಕಾರಿಗಳನ್ನು ಉಳಿಸಿಕೊಳ್ಳುತ್ತಿರಲಿಲ್ಲ. ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ನಾನು ಮಾತನಾಡುತ್ತಿಲ್ಲ.
ಬದಲಾಗಿ ರಾಜ್ಯದ ಜನತೆ ಮತ್ತು ಬಿಜೆಪಿ ಶಾಸಕರೇ ಮಾತನಾಡುತ್ತಿದ್ದಾರೆ’ ಎಂದು ಕಿಡಿಕಾರಿದರು.
‘ಯೋಗೇಶ್ವರ್ ಯಾವ ರೀತಿ ವಸೂಲಿ ದಂದೆ ಮಾಡುತ್ತಿದ್ದಾರೆ ಎಂದು ಚನ್ನಪಟ್ಟಣದ ಊರೂರುಗಳಲ್ಲೇ ಚರ್ಚೆ ಆಗುತ್ತಿದೆ. ಅವರು ತಮ್ಮ ಲೆಟರ್ ಹೆಡ್ ಅನ್ನು ಹೇಗೆಲ್ಲ ಬಳಸಿಕೊಂಡಿದ್ದಾರೆ ಎಂಬುದೂ ಗೊತ್ತಿದೆ’ ಎಂದುಸಿಪಿವೈ ವಿರುದ್ಧ ಕಿಡಿಕಾರಿದರು. ‘ಯೋಗೇಶ್ವರ್ಗೆ ಮಂತ್ರಿಗಿರಿ ಕೊಟ್ಟರೂ ನಾವೇನು ಹೆದರುವ ಅವಶ್ಯಕತೆ ಇಲ್ಲ. ಪ್ರಧಾನಮಂತ್ರಿಯನ್ನೇ ನೋಡಿರುವ ಕುಟುಂಬ ನಮ್ಮದು. ಹೀಗಿರುವಾಗ ಒಂದು ಮಂತ್ರಿ ಸ್ಥಾನಕ್ಕೆಹೆದರುವುದಿಲ್ಲ. ಯೋಗೇಶ್ವರ್ ಮಂತ್ರಿ ಆಗಿದ್ದಾಗಲೇ ಅವರನ್ನು ಸೋಲಿಸಿದ್ದೇವೆ. ಇಂತಹ ಅದೆಷ್ಟೋ ಮಂತ್ರಿಗಳನ್ನು ನಾನು ನೋಡಿದ್ದೇನೆ. ಯಾರು ಮಂತ್ರಿ ಆಗಲಿ, ಬಿಡಲಿ. ಚನ್ನಪಟ್ಟಣಕ್ಕೆ ನಾನೇ ಶಾಸಕ. ಅಲ್ಲಿನನ್ನನ್ನು ಬಿಟ್ಟು ಯಾರು ಏನು ಮಾಡಲು ಸಾಧ್ಯವಿಲ್ಲ’ ಎಂದರು.
ಸಿಪಿವೈ ಪ್ರತಿಕ್ರಿಯೆ: ತಮ್ಮ ವಿರುದ್ಧ ಕುಮಾರಸ್ವಾಮಿ ಆರೋಪಗಳ ಕುರಿತು ಚನ್ನಪಟ್ಟಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ‘ಅವರು ಅಚಾನಕ್ಕಾಗಿ ಎರಡು ಬಾರಿ ಮುಖ್ಯಮಂತ್ರಿ ಆದವರು. ಇನ್ನಾದರೂ ಇನ್ನೊಬ್ಬರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಬಿಡಬೇಕು. ಗಂಭೀರವಾಗಿ ವರ್ತಿಸುವುದನ್ನು ಕಲಿಯಬೇಕು’ ಎಂದು ಹೇಳಿದರು.
ತಮ್ಮ ವಿರುದ್ಧದ ವರ್ಗಾವಣೆ, ವಸೂಲಿ ದಂದೆ ಆರೋಪದ ಕುರಿತು ಮಾತನಾಡಿ ‘ಮುಂದಿನ ದಿನಗಳಲ್ಲಿ ಇದಕ್ಕೆ ಉತ್ತರ ಕೊಡುತ್ತೇನೆ. ಸಮಯ ಬಂದಾಗ ಕುಮಾರಸ್ವಾಮಿ ಬಗ್ಗೆ ಮಾತನಾಡುತ್ತೇನೆ. ನನ್ನ ವಿರುದ್ಧ
ಯಾವ್ಯಾವ ದಾಖಲೆಗಳನ್ನು ಇಟ್ಟುಕೊಂಡಿದ್ದಾರೆ ಎಂಬುದರ ಕುರಿತು ಅವರನ್ನೇ ಕೇಳಬೇಕು’ ಎಂದರು. ‘ಅವರ ಅಸ್ತಿತ್ವ ಉಳಿಸಿಕೊಳ್ಳಲು ಅವರು ಬಡಿದಾಡುತ್ತಿದ್ದಾರೆ. ನಾನು ಕ್ಷೇತ್ರ ಉಳಿಸಿಕೊಳ್ಳಲು
ಹೋರಾಡುತ್ತಿದ್ದೇನೆ. ಹಾಗಾಗಿ ಅವರು ನನ್ನನ್ನು ಇಂದ್ರ–ಚಂದ್ರ ಎಂದು ಹೊಗಳಲು ಸಾಧ್ಯವೇ?’ ಎಂದು ಪ್ರಶ್ನಿಸಿದರು.
***
ರಾಮನಗರ ಉಪ ವಿಭಾಗಾಧಿಕಾರಿ ನನಗೆ 3 ಕೋಟಿ ರೂಪಾಯಿ ಆಫರ್ ಕೊಟ್ಟಿದ್ದರು. ಅವರು ಯಾರು ಯಾರಿಗೆ ಎಷ್ಟೆಷ್ಟು ಕಮಿಷನ್ ಕೊಟ್ಟಿದ್ದಾರೆ ತಿಳಿದಿದೆ
- ಎಚ್.ಡಿ. ಕುಮಾರಸ್ವಾಮಿ,ಮಾಜಿ ಮುಖ್ಯಮಂತ್ರಿ
***
ಕುಮಾರಸ್ವಾಮಿ ಅಚಾನಕ್ಕಾಗಿ ಎರಡು ಬಾರಿ ಮುಖ್ಯಮಂತ್ರಿ ಆದವರು. ಇನ್ನೊಬ್ಬರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಬಿಡಲಿ
- ಸಿ.ಪಿ. ಯೋಗೇಶ್ವರ್,ವಿಧಾನ ಪರಿಷತ್ ಸದಸ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.