ಮಾಗಡಿ: ದಲಿತರಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಬೇಕು ಎಂದು ರಾಜ್ಯ ಎಸ್ಎಫ್ ಐ ಉಪಾಧ್ಯಕ್ಷ ಬ್ಯಾಲಕೆರೆ ಎಸ್.ಚಿಕ್ಕರಾಜು ಆಗ್ರಹಪಡಿಸಿದರು.
ಸಾವನದುರ್ಗದ ರೈತಭವನದಲ್ಲಿ ಭಾನುವಾರ ನಡೆದ ದಲಿತ ಜಾಗೃತಿ ಅಧ್ಯಯನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಂವಿಧಾನದ ಆಶಯಗಳನ್ನು ಯಥಾವತ್ತಾಗಿ ಜಾರಿಗೆ ತರಬೇಕು. ಸರ್ವರಿಗೆ ಸಮಬಾಳು, ಸರ್ವರಿಗೆ ಸಮಪಾಲು ಎಂಬ ಧ್ಯೇಯವಾಕ್ಯ ನೀಡಿರುವ ರಾಷ್ಟ್ರಕವಿ ಕುವೆಂಪು, ಡಾ,ಬಿ.ಆರ್.ಅಂಬೇಡ್ಕರ್ ಅವರ ಆಶಯಗಳಿಗೆ ಧಕ್ಕೆ ಬರದಂತೆ ಶೋಷಿತರು ಮತ್ತು ಎಲ್ಲಾ ವರ್ಗದ ಬಡವರು ಹಾಗೂ ಕಾರ್ಮಿಕರು ವಿದ್ಯಾರ್ಥಿಗಳು ಸಂಘಟಿತ ಹೋರಾಟ ಮಾಡಬೇಕಿದೆ ಎಂದರು.
ಕಟ್ಟಕಡೆಯ ಮನುಷ್ಯನಿಗೆ ನ್ಯಾಯ ದೊರೆಯುವ ತನಕ ಹೋರಾಟ ಮುಂದುವರೆಸಬೇಕು. ಶಿಕ್ಷಣ, ಸಂಘಟನೆ, ಹೋರಾಟದ ಮೂಲಕ ಎಲ್ಲ ಧರ್ಮಗಳ ಬಡವರಿಗೆ ನ್ಯಾಯ ದೊರಕಿಸಿಕೊಡಲು ಶೋಷಿತರಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದರು.
ದಲಿತ ಹಕ್ಕುಗಳ ಸಮಿತಿ ಕರ್ನಾಟಕದ ಮುಖಂಡ ಮಹಾದೇವ್ ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ ಯೋಜನೆ ಬಗ್ಗೆ ಮಾತನಾಡಿದರು.
ಹಿರಿಯ ಆರ್ಥಿಕ ತಜ್ಞ ಡಾ.ಟಿ.ಆರ್.ಚಂದ್ರಶೇಖರ್ ಮಾತನಾಡಿ, ಗುಡಿಕೈಗಾರಿಕೆಗಳ ನಾಶ, ಸರ್ಕಾರಿ ಸ್ವಾಮ್ಯದ ಕೈಗಾರಿಕೆಗಳನ್ನು ಖಾಸಗಿ ವ್ಯಕ್ತಿಗಳಿಗೆ ವಹಿಸುತ್ತಿರುವುದು ಮತ್ತು ನೋಟು ರದ್ದತಿ, ಜಿ.ಎಸ್.ಟಿ ಅವೈಜ್ಞಾನಿಕ ಅನುಷ್ಠಾನದಿಂದಾಗಿ ದೇಶದ ಅರ್ಥವ್ಯವಸ್ಥೆ ಕುಸಿದಿದೆ; ತಳವರ್ಗಗಳ ಬದುಕು ಬೀದಿಗೆ ಬಿದ್ದಿದೆ ಎಂದರು.
ಡಿ.ಎಚ್.ಎಸ್. ರಾಜ್ಯ ಸಹಸಂಚಾಲಕ ಬಿ.ರಾಜಶೇಖರ ಮೂರ್ತಿ, ರಾಜ್ಯ ಸಮಿತಿ ಸದಸ್ಯೆ ಎಸ್.ಜಿ.ವನಜ, ಹೊನ್ನಸ್ವಾಮಯ್ಯ, ಗೋವಿಂದರಾಜು, ಶ್ರೀನಿವಾಸ್ ಮಾತನಾಡಿದರು.
ಹೋರಾಟಗಾರರಾದ ನರಸಿಂಹಮೂರ್ತಿ, ಬಿ.ವಿ.ಶ್ರೀನಿವಾಸ್, ಲೋಕೇಶ್, ಬಿ.ವಿ.ವೆಂಕಟೇಶ್, ಸುರೇಶ್, ರಾಜಣ್ಣ, ಭರತ್, ಶಾಂತಮ್ಮ ಇದ್ದರು.