ಮಾಗಡಿ: ‘ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡಬೇಕು’ ಎಂದು ಪುರಸಭೆಯ ಪರಿಸರ ಎಂಜಿನಿಯರ್ ಕುಸುಮಾ ಸೂಚಿಸಿದರು.
ಸೋಮವಾರ ಪುರಸಭೆ ಪೌರ ಕಾರ್ಮಿಕರಿಗೆ ಸ್ವಚ್ಛತೆ ಬಗ್ಗೆ ಸೂಚನೆ ನೀಡಿ ಅವರು ಮಾತನಾಡಿದರು.
ಲಾಕ್ಡೌನ್ ಹಿನ್ನೆಲೆಯಲ್ಲಿ ಕಡ್ಡಾಯವಾಗಿ ಅಂಗಡಿಮುಗ್ಗಟ್ಟುಗಳ ಬಾಗಿಲು ಮುಚ್ಚಿಸಬೇಕು. ನಿಮ್ಮ ಜೊತೆ ನಾವಿದ್ದೇವೆ. ಮಾಸ್ಕ್ ಧರಿಸದ ಸಾರ್ವಜನಿಕರಿಗೆ ದಂಡ ವಿಧಿಸಲಾಗುವುದು. ಯಾವುದೇ ಮುಲಾಜಿಲ್ಲದೆ ಮಾಸ್ಕ್ ಧರಿಸದವರನ್ನು ಹಿಡಿದು ನಿಲ್ಲಿಸಿ ದಂಡ ಹಾಕಬೇಕು ಎಂದರರು.
ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ಕ್ರಿಮಿನಾಶಕ ಸಿಂಪಡಿಸಿ ಪಟ್ಟಣದಲ್ಲಿ ಸಂಪೂರ್ಣ ಸ್ವಚ್ಛತೆ ಕಾಪಾಡುವುದು ಎಲ್ಲರ ಕರ್ತವ್ಯ. ನಟರಾಜ ಬಡಾವಣೆಯ ಉದ್ಯಾನದ ನಿವೇಶನ ಮತ್ತು ರಸ್ತೆಬದಿ ತ್ಯಾಜ್ಯ ಸುರಿಯುವುದನ್ನು ತಡೆಗಟ್ಟಬೇಕಿದೆ. ತ್ಯಾಜ್ಯ ಸುರಿಯವ ಟ್ರ್ಯಾಕ್ಟರ್ಗಳ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಬೇಕು. ಸ್ವಚ್ಛತೆ ಕಾಪಾಡದಿದ್ದರೆ ಸೂಕ್ತಕ್ರಮ ಕೈಗೊಳ್ಳಲಾಗುವುದು ಎಂದರು.
ಪುರಸಭೆ ಆರೋಗ್ಯ ಅಧಿಕಾರಿಗಳಾದ ಸುಷ್ಮಾ, ರವಿಕುಮಾರ್, ಪೌರ ಕಾರ್ಮಿಕರಾದ ನಾಗಯ್ಯ, ವೆಂಕಟರಮಣಯ್ಯ, ದೊಡ್ಡಯ್ಯ, ಇನಾಯತ್ ಇದ್ದರು.