ಚನ್ನಪಟ್ಟಣ: ತಾಲ್ಲೂಕಿನ ಕೂಡ್ಲೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡವು ಶಿಥಿಲಾವಸ್ಥೆ ತಲುಪಿರುವ ವಿಷಯ ತಿಳಿದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಶುಕ್ರವಾರ ಗ್ರಾಮಕ್ಕೆ ಆಗಮಿಸಿ ಶಾಲೆಯ ದುಃಸ್ಥಿತಿಯನ್ನು ಪರಿಶೀಲನೆ
ನಡೆಸಿದರು.
ಕಟ್ಟಡದ ಮೇಲ್ಚಾವಣಿಯ ಹೆಂಚುಗಳು ಹಾರಿ ಹೋಗಿದ್ದು, ಮಳೆಗಾಲದಲ್ಲಿ ನೀರು ಸೋರುತ್ತಿದೆ. ಮಾಳಿಗೆಗೆ ಹಾಕಿರುವ ಮರದ ಪಟ್ಟಿಗಳು ಗೆದ್ದಿಲು ಹಿಡಿದು ಬೀಳುವ ಹಂತ ತಲುಪಿವೆ. ಮಕ್ಕಳು ಇಲ್ಲಿ ಕುಳಿತು ಪಾಠ ಕೇಳುವುದು ಹೇಗೆ ಎಂದು ಪೋಷಕರು ಆತಂಕ ತೋಡಿಕೊಂಡಿದ್ದ ವಿಚಾರ ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜು, ‘ಶೀಘ್ರವೇ ನಿಯಮಾವಳಿ ಪ್ರಕಾರ ಶಾಲೆಯ ಎಸ್.ಡಿ.ಎಂ.ಸಿ. ಪದಾಧಿಕಾರಿಗಳ ಸಭೆ ನಡೆಸಿ ಮೊದಲ ಆದ್ಯತೆ ಮೇರೆಗೆ ಇಲ್ಲಿನ ಶಾಲೆಯ ಕೊಠಡಿ ನಿರ್ಮಾಣ ಕಾಮಗಾರಿಯನ್ನು ಆರಂಭಿಸಲಾಗುವುದು’ ಎಂದರು.
ಕಳೆದ ಎರಡು ವರ್ಷಗಳ ಹಿಂದೆ ಬಿಡದಿಯ ಟೊಯೊಟಾ ಕಿರ್ಲೋಸ್ಕರ್ ಕಂಪನಿಯ ಅಧಿಕಾರಿಗಳು ಸಹ ಆಗಮಿಸಿ ಶಾಲೆಗೆ ತಮ್ಮ ಸಮಾಜಮುಖಿ ಕಾರ್ಯಗಳಿಗಾಗಿ ಸ್ಥಾಪಿಸಿರುವ ಸಿ.ಎಸ್.ಆರ್. ನಿಧಿಯಲ್ಲಿ ಆರು ಕೊಠಡಿ ನಿರ್ಮಾಣ ಮಾಡುವುದಾಗಿ ತಿಳಿಸಿದ್ದರು. ಈ ವಿಷಯ ಪತ್ರಿಕೆಯಲ್ಲಿ ಪ್ರಕಟವಾದ ಹಿನ್ನೆಲೆಯಲ್ಲಿ ಕಂಪನಿಯ ಅಧಿಕಾರಿಗಳು ಸಹ ಶಿಕ್ಷಣ ಇಲಾಖೆ ಅಧಿಕಾರಿಗಳ ಜೊತೆ ಸ್ಥಳಕ್ಕೆ ಆಗಮಿಸಿ ಕೊಠಡಿ ನಿರ್ಮಿಸುವ ಭರವಸೆ ನೀಡಿದರು.
ಗ್ರಾ.ಪಂ. ಅಧ್ಯಕ್ಷ ಗುಂಡಣ್ಣ, ಸದಸ್ಯರಾದ ಗೋವಿಂದೇಗೌಡ, ವೆಂಕಟೇಶ್, ಪಿಡಿಒ ಪದ್ಮಾ, ಎಸ್ಡಿಎಂಸಿ ಅಧ್ಯಕ್ಷ ವೆಂಕಟೇಶ್, ಮುಖಂಡ ರಾದ ನರಸಿಂಹ ರಾಜೇ ಅರಸು, ರವಿಕುಮಾರ್, ಚಿಕ್ಕಯ್ಯ, ಜಿ. ವೆಂಕಟೇಶ್, ನಾಗರಾಜು, ರಾಮಸ್ವಾಮಿ, ಶಾಲಾ ಮುಖ್ಯಶಿಕ್ಷಕ ಶೇಖರಯ್ಯ ಮಠಪತಿ, ರವಿ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.