ರಾಮನಗರ: ಕನ್ನಡ ಸಾರಸ್ವತ ಲೋಕಕ್ಕೆ ಶ್ರೀಮಂತ ಜನಪದ ಸಾಹಿತ್ಯವನ್ನು ಕಟ್ಟಿಕೊಟ್ಟ ನಮ್ಮ ಅನಕ್ಷರಸ್ಥ ಗ್ರಾಮೀಣ ಜನಪದರ ಕೊಡುಗೆಯೂ ಸಾಕಷ್ಟಿದೆ. ಸಾರ್ವಕಾಲಿಕ ಸತ್ಯದ ನುಡಿಗಳನ್ನು ಜನಪದ ಸಾಹಿತ್ಯದಲ್ಲಿ ನಾವು ಕಾಣಬಹುದು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಬೆಂಗಳೂರು ನಗರ ಘಟಕದ ಅಧ್ಯಕ್ಷ ಶಿವಾನಂದ ಶೆಟ್ಟಿ ಹೇಳಿದರು.
ಸಂಸ್ಕೃತಿ ಸೌರಭ ಟ್ರಸ್ಟ್ ನಗರದ ಶ್ರೀರಾಮ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕನ್ನಡ ನಿತ್ಯೋತ್ಸವ ಗೀತಗಾಯನ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪುರಸ್ಕಾರ ಸ್ವೀಕರಿಸಿ ಅವರು ಮಾತನಾಡಿದರು.
ಇವತ್ತು ಕನ್ನಡ ಪರ, ರೈತ ಪರ ಹೋರಾಟಗಾರರನ್ನು ಸರ್ಕಾರಗಳು ಅನುಮಾನ ದೃಷ್ಟಿಯಲ್ಲಿ ನೋಡುತ್ತವೆ. ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿರುವ ರೈತರ ಪರವಾಗಿ ನಗರಗಳಲ್ಲಿರುವ ಅವರ ಮಕ್ಕಳು ಹೋರಾಟ ಮಾಡುವುದು ತಪ್ಪಾ ಎಂದು ಪ್ರಶ್ನಿಸಿದರು.
ಮತ್ತೊಬ್ಬ ಪ್ರಶಸ್ತಿ ಪುರಸ್ಕೃತರಾದ ರಂಗಭೂಮಿ ಕಲಾವಿದ ಎಸ್.ಪಿ. ಕಾಂತರಾಜ್ ಪಟೇಲ್ ಮಾತನಾಡಿ, ‘ನಾವು ಸತ್ತ ನಂತರ ಉಳಿಯುವುದು ನಮ್ಮ ಒಳ್ಳೆಯ ಗುಣ ಹಾಗೂ ನಾವು ಸಮಾಜಕ್ಕೆ ಮಾಡುವ ಒಳ್ಳೆಯ ಕೆಲಸಗಳು. ಪ್ರತಿಯೊಬ್ಬರು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಬದುಕೋಣ’ ಎಂದರು.
ಜಿಲ್ಲಾ ಸರ್ಕಾರಿ ನೌಕರರ ಅಧ್ಯಕ್ಷ ಆರ್.ಕೆ. ಭೈರಲಿಂಗಯ್ಯ ಅಧ್ಯಕ್ಷತೆವಹಿಸಿ ಮಾತನಾಡಿ, ‘ಕನ್ನಡ ರಾಜ್ಯೋತ್ಸವ ಒಂದು ದಿನದ ಸೀಮಿತ ಆಚರಣೆಯಲ್ಲ. ಇದು ನಿತ್ಯೋತ್ಸವ ಆಗಬೇಕು’ ಎಂದರು.
ಕರ್ನಾಟಕ ರಕ್ಷಣಾ ವೇದಿಕೆ ರಾಮನಗರ ಜಿಲ್ಲಾ ಅಧ್ಯಕ್ಷ ಎನ್. ರಾಜು, ಉಸ್ತುವಾರಿ ಜಿಲ್ಲಾ ಅಧ್ಯಕ್ಷ ಕನ್ನಡ ಮಂಜು, ಸ್ವತಂತ್ರ್ಯ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷ ಕೆ.ಎಸ್. ಭಾಸ್ಕರ್ ಮಾತನಾಡಿದರು. ಸಂಸ್ಕೃತಿ ಸೌರಭ ಟ್ರಸ್ಟ್ ಅಧ್ಯಕ್ಷ ರಾ.ಬಿ. ನಾಗರಾಜು ಪ್ರಾಸ್ತಾವಿಕ ಮಾತನಾಡಿದರು. ಟ್ರಸ್ಟ್ನ ಕಾರ್ಯದರ್ಶಿ ಎಚ್.ಬಿ. ಸಿದ್ದರಾಜು, ಶಿಕ್ಷಕ ರಾಜಶೇಖರ್ ಪಾಟೀಲ್ ಉಪಸ್ಥಿತರಿದ್ದರು.
ಗಾಯಕರಾದ ಮೈಸೂರು ಆರ್.ಕೆ. ಕೃಷ್ಣಮೂರ್ತಿ, ಬೆಂಗಳೂರು ರಘುನಾಥ್, ಕೆಂಗಲ್ ವಿನಯ್ ಕುಮಾರ್, ಎಚ್.ವಿ. ಮೂರ್ತಿ, ಬೊಮ್ಮಚ್ಚನಹಳ್ಳಿ ಗೋಪಾಲ್, ಎಸ್. ಗಂಗಾಧರ್, ಧನುಶ್ರೀ ಗೀತಗಾಯನ ನಡೆಸಿಕೊಟ್ಟರು.