ಬಿಡದಿ: ಜನಸಾಮಾನ್ಯರ ಧ್ವನಿಯಾಗಿ ಸೇವೆ ಮಾಡಲು ಸಹಕಾರಿ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳಿವೆ ಎಂದು ಶಾಸಕ ಎ.ಮಂಜುನಾಥ್ ಕಿವಿಮಾತು ಹೇಳಿದರು.
ಇಲ್ಲಿನ ಮಂಜುನಾಥ ಕಲ್ಯಾಣ ಮಂಟಪದಲ್ಲಿ ರೈತರ ಸೇವಾ ಸಹಕಾರ ಬ್ಯಾಂಕ್ ಚುನಾವಣಾ ಸಂಬಂಧ ನಡದ ಜೆ.ಡಿ.ಎಸ್ ಪಕ್ಷದ ಪೂರ್ವಭಾವಿ ಸಭೆಯಲ್ಲಿ ಶಾಸಕ ಎ.ಮಂಜುನಾಥ್ ಮಾತನಾಡಿದರು.
‘ಸಿ.ಬೋರಯ್ಯನವರು ಸ್ಥಾಪಿಸಿದ ಈ ಬ್ಯಾಂಕ್ ರೈತರಿಗೆ ಉತ್ತಮ ಸೇವೆ ಒದಗಿಸುವ ಮೂಲಕ ಹೆಸರು ಗಳಿಸಿದೆ. ಎಚ್.ಎಲ್ ಚಂದ್ರಣ್ಣನವರ ಮಾರ್ಗದರ್ಶನದಲ್ಲಿ 20 ವರ್ಷಗಳಿಂದ ಜೆ.ಡಿ.ಎಸ್ ಬೆಂಬಲಿತರು ಆಡಳಿತ ಮಂಡಳಿ ಚುಕ್ಕಾಣಿ ಹಿಡಿದಿದ್ದರು. ಫೆ.2 ರಂದು ಮತ್ತೆ ಚುನಾವಣೆ ನಡೆಯಲಿದೆ. ಸಹಕಾರಿ ಕ್ಷೇತ್ರದಲ್ಲಿ ಅವಕಾಶ ಬೇಕೆಂಬ ಆಕಾಂಕ್ಷಿಗಳು ನಿಸ್ವಾರ್ಥಭಾವದಿಂದ ಚುನಾವಣೆ ಎದುರಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ಎಲ್ ಚಂದ್ರು ಮಾತನಾಡಿ, ಚುನಾವಣೆಗೆ ಸ್ಪರ್ಧೆ ಮಾಡಲು 12 ಅಭ್ಯರ್ಥಿಗಳನ್ನು ಪಕ್ಷದ ವತಿಯಿಂದ ಆಯ್ಕೆ ಮಾಡಲು ಅವಕಾಶವಿದೆ ಎಂದರು.
ಮುಖಂಡರಾದ ಶೇಷಪ್ಪ ಮಾತನಾಡಿ, ಚುನಾವಣೆಯಲ್ಲಿ ಪಕ್ಷದ ಬೆಂಬಲಿತರನ್ನು ಯಾವುದೇ ಮನಸ್ತಾಪ ಇಟ್ಟುಕೊಳ್ಳದೆ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಸಿ.ಉಮೇಶ್, ರಾಮಕೃಷ್ಣಯ್ಯ, ಸೋಮೇಗೌಡ, ಚಿಕ್ಕಣ್ಣಯ್ಯ, ರೈತರ ಸೇವಾ ಸಹಕಾರ ಬ್ಯಾಂಕ್ನ ಅಧ್ಯಕ್ಷ ಮಲ್ಲೇಶ್ ಅನಿಸಿಕೆ ವ್ಯಕ್ತಪಡಿಸಿದರು. 25 ಕ್ಕೂ ಹೆಚ್ಚು ಆಕಾಂಕ್ಷಿಗಳು ಜೆಡಿಎಸ್ ಪಕ್ಷದ ಬೆಂಬಲಿತರಾಗಿ ಕಣಕ್ಕಿಳಿಯಲು ಅವಕಾಶ ನೀಡುವಂತೆ ಶಾಸಕರಲ್ಲಿ ಮನವಿ ಮಾಡಿದರು.