ರಾಮನಗರ: ನಗರದ ವಾಟರ್ ಟ್ಯಾಂಕ್ ವೃತ್ತದಲ್ಲಿ ಜಿಲ್ಲಾ ದಲಿತ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ, ಸೋಮವಾರ ರಾತ್ರಿ ಭೀಮಾ ಕೋರೆಗಾಂವ್ ಯುದ್ಧದ ಸ್ಮರಣಾರ್ಥ ವಿಜಯೋತ್ಸವ ಆಚರಿಸಲಾಯಿತು.
ಕೆಪಿಸಿಸಿ ಸದಸ್ಯ ಶಿವಲಿಂಗಯ್ಯ ಮಾತನಾಡಿ, ‘ದೇಶದಾದ್ಯಂತ ಶೋಷಿತ ಸಮುದಾಯಗಳು ಜ . 1ರಂದು ಭೀಮ ಕೋರೆಗಾಂವ್ ಯುದ್ಧದ ವಿಜಯೋತ್ಸವವನ್ನು ಆಚರಣೆ ಮಾಡುತ್ತಿವೆ. ಇಂದಿಗೂ ಶೋಷಿತ ಸಮುದಾಯಗಳಾದ ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವರ್ಗದವರ ಮೇಲೆ ದೌರ್ಜನ್ಯ ನಿಂತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
‘ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಶೋಷಿತರಿಗೆ ಹಲವು ಹಕ್ಕುಗಳನ್ನು ನೀಡಿದರು. ಆದರೂ, ದೌರ್ಜನ್ಯಕ್ಕೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ಮುಂದುವರಿದು ಈಗಿನ ಸರ್ಕಾರ ಸಂವಿಧಾನವನ್ನು ಬದಲಾಯಿಸುವ ಮಾತನಾಡುತ್ತಿದೆ .ಇಂತಹ ಮತಿಹೀನರಿಗೆ ಶೋಷಿತರು ಬುದ್ಧಿ ಕಲಿಸಬೇಕು. ಆ ನಿಟ್ಟಿನಲ್ಲಿ ಶೋಷಿತರು ಕೋರೆಗಾಂವ್ ಯುದ್ಧವನ್ನು ಸ್ಫೂರ್ತಿಯಾಗಿ ಪರಿಗಣಿಸಿ ಕಾರ್ಯಪ್ರವೃತ್ತರಾಗಬೇಕು’ ಎಂದರು.
ದಲಿತ ಸಂಘಟನೆಗಳ ಮಹಾ ಒಕ್ಕೂಟ ಅಧ್ಯಕ್ಷ ಎಂ. ಜಗದೀಶ್, ಅಂಬೇಡ್ಕರ್ ಸೇನೆ ಜಿಲ್ಲಾಧ್ಯಕ್ಷ ಸಾಗರ್, ಗೌರವಾಧ್ಯಕ್ಷ ಗೋವಿಂದರಾಜ್, ಉದ್ಯಮಿ ಜರ್ನಾಧನ್, ವಕೀಲ ಶಿವಣ್ಣ, ಮುಖಂಡರಾ ಸಿದ್ದಾರ್ಥ್, ಗಂಗಾಧರ್, ಕೂಟಗಲ್ ಸಿದ್ದರಾಜು, ಬೊಮ್ಮಚನ ಹಳ್ಳಿ ಸಂತೋಷ್, ಟೋಪಿ ರಮೇಶ್ ಮತ್ತು ಸಂತೋಷ್ ಇದ್ದರು.