ಕನಕಪುರ: ಬೂದಿಗುಪ್ಪೆ ಗ್ರಾಮದಲ್ಲಿ ಭಾನುವಾರ ಪೊಲೀಸರನ್ನು ಕಂಡು ಹೆದರಿದ ವ್ಯಕ್ತಿಯೊಬ್ಬರು ಅವರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ನೀರಿಗೆ ಹಾರಿ ಸಾವಿಗೀಡಾಗಿದ್ದಾರೆ.
ಬೂದಿಗುಪ್ಪೆ ಕಾಳಯ್ಯ (40) ಮೃತ ವ್ಯಕ್ತಿ. ಅವರಿಗೆ ಈಜು ಬರುತ್ತಿರಲಿಲ್ಲ. ಬೆಂಗಳೂರಿನ ಐಟಿಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ.
ಭಾನುವಾರ ರಜೆ ಕಳೆಯಲು ಕಾಳಯ್ಯ ಬರಡನಹಳ್ಳಿ ರಸ್ತೆಯ ಚಿಕ್ಕಹೊಳೆ ದಂಡೆ ಮೇಲೆ ಸ್ನೇಹಿತ ರೊಂದಿಗೆ ಸೇರಿದ್ದರು. ಇದೇ ಮಾರ್ಗವಾಗಿ ಬರಡನಹಳ್ಳಿಗೆ ಹೋಗುತ್ತಿದ್ದ ಪೊಲೀಸರನ್ನು ನೋಡಿದ ಕಾಳಯ್ಯ ಹಾಗೂ ನಾಲ್ವರು ಸ್ನೇಹಿತರು ಅವರಿಂದ ತಪ್ಪಿಸಿಕೊಳ್ಳಲು ಚಿಕ್ಕಹೊಳೆಗೆ ಧುಮಿಕಿದ್ದಾರೆ.
ಕಾಳಯ್ಯ ಅವರಿಗೆ ಈಜಲು ಬಾರದೆ ನೀರಿನಲ್ಲಿ ಮುಳುಗಿದ್ದಾರೆ. ಪೊಲೀಸರೇ ಅವರನ್ನು ರಕ್ಷಿಸಿ ದಯಾನಂದ ಸಾಗರ್ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ಮೃತರ ಸಂಬಂಧಿಕರು ಗ್ರಾಮಾಂತರ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿ ಸಾವಿಗೆ ನ್ಯಾಯ ಸಿಗಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು.
ಸರ್ಕಲ್ ಇನ್ಸ್ಪೆಕ್ಟರ್ ಕೃಷ್ಣ ಮತ್ತು ಮಿಥುನ್ ಶಿಲ್ಪಿ ಠಾಣೆಗೆ ಭೇಟಿ ಗ್ರಾಮಸ್ಥರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ನಂತರ ಡಿವೈಎಸ್ಪಿ ಗಿರಿ ಕೆ.ಎಸ್ ಭೇಟಿ ನೀಡಿ ಮೃತರ ಕುಟುಂಬ ಸದಸ್ಯರ ಮನವೊಲಿಸಲು ಪ್ರಯತ್ನ ಮಾಡಿದರು.
ಈ ಹಿಂದೆ ತಿಗಳರ ಹೊಸಳ್ಳಿ ಗ್ರಾಮದಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋದ ವ್ಯಕ್ತಿಯೊಬ್ಬರು ಇದೇ ರೀತಿ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದರು.