ಕನಕಪುರ: ತಾಲ್ಲೂಕಿನ ಹಾರೋಹಳ್ಳಿ ಹೋಬಳಿಯ ಕೆಬ್ಬೇದೊಡ್ಡಿ ಬಳಿಯಿರುವ ಪಿರಮಿಡ್ ವ್ಯಾಲಿಯಲ್ಲಿ ಬುದ್ಧ ಪೂರ್ಣಿಮೆ ಅಂಗವಾಗಿ ಮೂರು ದಿನಗಳ ಕಾಲ ನಡೆಯುವ ಕರ್ನಾಟಕ ಧ್ಯಾನ ಮಹಾಯಜ್ಞ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಲಾಯಿತು.
ಇಲ್ಲಿನ ಪಿರಮಿಡ್ ವ್ಯಾಲಿಯು ಅಂತರಾಷ್ಟ್ರೀಯ ಮಟ್ಟದ ಧ್ಯಾನ ಕೇಂದ್ರವಾಗಿದ್ದು ದೇಶ ಮತ್ತು ವಿದೇಶಗಳಿಂದ ಧ್ಯಾನಾಸಕ್ತರು ಬರುತ್ತಾರೆ. ಮೇ 16ರಂದು ಮುಕ್ತಾಯವಾಲಿದೆ.
ಮೂರು ದಿನಗಳ ಕಾಲ ನಡೆಯುವ ಧ್ಯಾನ, ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಪಿಎಂಸಿ ನಡೆಸಿಕೊಡುತ್ತಿದೆ. ಬ್ರಹ್ಮಶ್ರೀ ಪತ್ರೀಜಿ 1990ರಲ್ಲಿ ವಿಶ್ವದಲ್ಲೇ ಅತಿದೊಡ್ಡ ಧ್ಯಾನ ಮಂದಿರವನ್ನು ಇಲ್ಲಿ ನಿರ್ಮಾಣ ಮಾಡಿದ್ದು ಪ್ರತಿವರ್ಷ ಬುದ್ಧ ಪೂರ್ಣಿಮೆಯಂದು ಅಂತರರಾಷ್ಟ್ರೀಯ ಮಟ್ಟದ ಧ್ಯಾನ ಕಾರ್ಯಕ್ರಮವನ್ನು ನಡೆಸಿ ಕೊಡುತ್ತಿದ್ದಾರೆ.
ಭಾನುವಾರ ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಮಂತ್ರಾಲಯದ ಸುಬುಧೇಂದ್ರ ತೀರ್ಥ ಸ್ವಾಮೀಜಿ, ಮಾಜಿ ಗೃಹ ಸಚಿವ ಎಂ.ಬಿ. ಪಾಟೀಲ, ದೆಹಲಿಯ ಡಾ.ಅಶೋಕ್ ದಳವಾಯಿ ಪಾಲ್ಗೊಳ್ಳಲಿದ್ದಾರೆ.
ಸೋಮವಾರ ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಗೃಹ ಸಚಿವ ಆರಗ ಜ್ಞಾನೇಂದ್ರ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪಾಲ್ಗೊಳ್ಳಲಿದ್ದಾರೆ.