ರಾಮನಗರ: ‘ಬೆಂಗಳೂರು ಪದವೀಧರರ ಕ್ಷೇತ್ರದ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಆರ್.ಎಸ್. ಉದಯ್ ಸಿಂಗ್ ಅವರು, ಪದವೀಧರರ ಸಮಸ್ಯೆಗಳ ಕುರಿತು ಪ್ರಾಮಾಣಿಕವಾಗಿ ದನಿ ಎತ್ತುತ್ತಾ ಬಂದಿದ್ದಾರೆ. ಹಾಗಾಗಿ, ಕರ್ನಾಟಕ ವೈಜ್ಞಾನಿಕ ಸಂಶೋಧನಾ ಪರಿಷತ್ತು ಅವರಿಗೆ ಬೆಂಬಲ ಘೋಷಿಸಿದೆ’ ಎಂದು ಪರಿಷತ್ತಿನ ರಾಜ್ಯಾಧ್ಯಕ್ಷ ಹುಲಿಕಲ್ ನಟರಾಜು ಹೇಳಿದರು.
‘ಹೈಕೋರ್ಟ್ ವಕೀಲರೂ ಆಗಿರುವ ಸಿಂಗ್ ಅವರು, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಪದವೀಧರರು ಹಾಗೂ ನಿರುದ್ಯೋಗಿಗಳ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದಿದ್ದಾರೆ. ಅಂತಹವರು ವಿಧಾನ ಪರಿಷತ್ ಸದಸ್ಯರಾದರೆ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಹಾಗಾಗಿ, ಪದವೀಧರರು ಸಿಂಗ್ ಅವರನ್ನು ಬೆಂಬಲಿಸಿ ಮತ ಹಾಕಬೇಕು’ ಎಂದು ನಗರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಪದವೀಧರರ ಮತ ಪಡೆದು ಆಯ್ಕೆಯಾದವರು ಅವರ ಆಶೋತ್ತರಗಳಿಗೆ ಸ್ಪಂದಿಸಿಲ್ಲ. ಇದರಿಂದಾಗಿ, ಪದವೀಧರರ ಸಮಸ್ಯೆಗಳು ಅಧಿವೇಶನಗಳಲ್ಲಿ ಚರ್ಚೆಗೆ ಬರುತ್ತಿಲ್ಲ. ಪ್ರತಿನಿಧಿಯಾದವರು ಸಮಸ್ಯೆಗಳ ಕುರಿತು ಸರ್ಕಾರದ ಗಮನ ಸೆಳೆಯಬೇಕು. ಇದುವರೆಗೆ ಆ ಕೆಲಸವನ್ನು ಯಾರೂ ಮಾಡಿಲ್ಲ. ಸಿಂಗ್ ಅವರಲ್ಲಿ ಅಂತಹ ಕಳಕಳಿ ಮತ್ತು ಪ್ರಾಮಾಣಿಕತೆ ಇದೆ. ಹಾಗಾಗಿ, ಅವರಿಗೆ ಒಮ್ಮೆ ಅವಕಾಶ ನೀಡಬೇಕು’ ಎಂದು ಹೇಳಿದರು.
ಪರಿಷತ್ನ ರಾಜ್ಯ ಪ್ರಧಾನ ಕಾರ್ಯದರ್ಶಿ ಚಿಕ್ಕ ಹನುಮಂತೇಗೌಡ ಮಾತನಾಡಿ, ‘ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅನ್ಯಾಯಕ್ಕೊಳಗಾದವರ ಪರವಾಗಿ ಸಿಂಗ್ ಅವರು ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಕಾನೂನು ಸಮರ ನಡೆಸಿದ್ದಾರೆ. ನಿರುದ್ಯೋಗಿಗಳಿಗೆ ಕೈಲಾದ ನೆರವು ನೀಡುತ್ತಾ ಬಂದಿದ್ದಾರೆ. ಇಂತಹವರು ನಿಜವಾಗಿಯೂ ಪದವೀಧರರ ಪ್ರತಿನಿಧಿಯಾಗಲು ಅರ್ಹರು’ ಎಂದರು.
ಶಿಕ್ಷಣ ತಜ್ಞ ಮಧುಕುಮಾರ್, ರೇಣುಕಾ ಪ್ರಸಾದ್, ಮಂಜುನಾಥ್ ಕೆ.ಯು, ಚಂದ್ರು, ಶ್ರೀನಿವಾಸ್, ಎಂ.ಎ. ಪೂರ್ಣಚಂದ್ರ, ಎನ್.ವಿ. ಲೋಕೇಶ್ ಹಾಗೂ ಇತರರು ಇದ್ದರು.
ಕ್ಷೇತ್ರವನ್ನು ಪ್ರತಿನಿಧಿಸಿದವರು ಪದವೀಧರರ ಸಮಸ್ಯೆಗೆ ಸ್ಪಂದಿಸುವ ಪ್ರತಿನಿಧಿಗಳಾಗಿಲ್ಲ. ಹಾಗಾಗಿ ಈ ಸಲದ ಚುನಾವಣೆಯಲ್ಲಿ ಉದಯ್ ಸಿಂಗ್ ಅವರಿಗೆ ಒಂದು ಅವಕಾಶ ಕೊಡಬೇಕಿದೆ