ರಾಮನಗರ: ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಿದ ಆರೋಪಿಗೆ14 ವರ್ಷ ಜೀವಾವಧಿ ಶಿಕ್ಷೆ ಹಾಗೂ ₹1 ಲಕ್ಷ ದಂಡ ವಿಧಿಸಿ ಇಲ್ಲಿನ ಮೂರನೇ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಲಯವು ಬುಧವಾರ ಆದೇಶ ನೀಡಿತು.
ಚನ್ನಪಟ್ಟಣ ನಿವಾಸಿ ನದ್ದು ಅಲಿಯಾಸ್ ನದೀಮ್ ಶಿಕ್ಷೆಗೆ ಗುರಿಯಾದವರು. ಪ್ರಕರಣದ ಎರಡನೇ ಆರೋಪಿಯಾಗಿದ್ದ ಮುಜಾಮಿಲ್ ಗೆ 1 ವರ್ಷ ಜೈಲು ವಾಸ ಹಾಗೂ ₹500 ದಂಡ ವಿಧಿಸಲಾಗಿದ್ದು, ಮೂರನೇ ಆರೋಪಿ ಸದ್ದಾಂರನ್ನು ನ್ಯಾಯಾಲಯವು ಖುಲಾಸೆ ಮಾಡಿತು.
ಹಿನ್ನೆಲೆ: ಚನ್ನಪಟ್ಟಣದ ಡೈರಾ ಶಾಲೆಯ ಬಳಿ 2017ರ ಸೆಪ್ಟೆಂಬರ್ 21ರಂದು ಕಲಾ ನಗರ ನಿವಾಸಿ ಫೈಜಲ್ ಎಂಬುವರನ್ನು ಕ್ಷುಲಕ ಕಾರಣಕ್ಕೆ ಹತ್ಯೆ ಮಾಡಲಾಗಿತ್ತು. ಈ ಸಂಬಂಧ ಚನ್ನಪಟ್ಟಣ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶ ಗೋಪಾಲಕೃಷ್ಣ ರೈ ಅವರು ಬುಧವಾರ ಶಿಕ್ಷೆಯ ಪ್ರಮಾಣ ಪ್ರಕಟಿಸಿದರು.