ರಾಮನಗರ: ತಾಲ್ಲೂಕಿನ ಪಾಲಭೋವಿದೊಡ್ಡಿ ಗ್ರಾಮದ ಚಿಕ್ಕಮ್ಮ ದೇವಸ್ಥಾನದ ಹುಂಡಿಯಲ್ಲಿನ ಹಣವನ್ನು ಗುರುವಾರ ರಾತ್ರಿ ಕಳ್ಳರು ದೋಚಿದ್ದಾರೆ.
ಬಾಗಿಲಿನ ಬೀಗ ಹಾಕಿದಂತೆ ಇದ್ದು, ಶುಕ್ರವಾರ ಬೆಳಿಗ್ಗೆ ಅರ್ಚಕರು ದೇಗುಲಕ್ಕೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಕಿಟಕಿ ಸರಳುಗಳನ್ನು ಮುರಿದು ಒಳಹೋಗಲು ಕಳ್ಳರು ಯತ್ನಿಸಿದ್ದು, ಅದು ಸಾಧ್ಯವಾಗದಿದ್ದಾಗ ನಕಲಿ ಕೀ ಬಳಸಿ ಬಾಗಿಲು ತೆರೆದು ಹುಂಡಿ ಒಡೆದು ಹಣ ದೋಚಿದ್ದಾರೆ ಎನ್ನಲಾಗಿದೆ.
ದೇಗುಲದಲ್ಲಿನ ಹುಂಡಿಯನ್ನು 2015ರಲ್ಲಿ ಕಡೆಯ ಬಾರಿಗೆ ತೆಗೆಯಲಾಗಿತ್ತು. ಕಳೆದ ಏಳು ವರ್ಷದಿಂದ ಅದನ್ನು ತೆರೆದಿರಲಿಲ್ಲ. ಹೀಗಾಗಿ ಲಕ್ಷಾಂತರ ರೂಪಾಯಿ ಸಂಗ್ರಹ ಆಗಿತ್ತು ಎನ್ನಲಾಗಿದೆ.
ಇದೇ ಗ್ರಾಮದ ಮಹದೇಶ್ವರ- ಶನೇಶ್ವರ ದೇಗುಲದಲ್ಲಿಯೂ ಕಳವಿಗೆ ವಿಫಲ ಯತ್ನ ನಡೆದಿದೆ.