ಕನಕಪುರ: ದ್ಯಾಪೇಗೌಡನದೊಡ್ಡಿ ಬಳಿ ಶುಕ್ರವಾರ ಸಂಜೆ ವಿದ್ಯುತ್ ಟ್ರಾನ್ಸ್ಫಾರ್ಮರ್ ಅಳವಡಿಕೆ ಮಾಡುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ವೈಯರ್ ಟಿಪ್ಪರ್ ಚಕ್ರಕ್ಕೆ ಸುತ್ತಿಕೊಂಡು ವಿದ್ಯುತ್ ಕಂಬ ಮುರಿದು ಇಬ್ಬರು ತೀವ್ರ, ನಾಲ್ವರು ಸಾಧಾರಣವಾಗಿ ಗಾಯಗೊಂಡಿದ್ದಾರೆ.
ಕೆರಳಾಳುಸಂದ್ರ ಗ್ರಾಮದ ಗೋಪಿ ಎಂಬುವರು ತೀವ್ರವಾಗಿ ಗಾಯಗೊಂಡು ಬೆಂಗಳೂರಿನ ಸಂಜಯ್ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗೋಪಿ ಅವರ ಪತ್ನಿ ಶೀಲಾ ಮತ್ತು ಅವರ ಮಗಳು ಕುಸುಮ ಹಾಗೂ ವಿದ್ಯುತ್ ಲೈನ್ ಎಳೆಯುತ್ತಿದ್ದ ಇಬ್ಬರು ಕಾರ್ಮಿಕರು ಗಾಯಗೊಂಡುಕನಕಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕನಕಪುರದಿಂದ ಕೆರಳಾಳುಸಂದ್ರ ಗ್ರಾಮಕ್ಕೆ ಹೋಗುವ ನಾಲೆ ಏರಿ ಮೇಲಿನ ಮಳಗಾಳು ಲಿಂಗೇಗೌಡರ ಜಮೀನಿನ ಬಳಿ ವಿದ್ಯುತ್ ಟ್ರಾನ್ಸ್ಫಾರ್ಮರ್ ಅಳವಡಿಕೆ ಕಾರ್ಯವು ಶುಕ್ರವಾರ ನಡೆಯುತ್ತಿದ್ದು ಸುಮಾರು ಸಂಜೆ 6 ಗಂಟೆ ಸಮಯದಲ್ಲಿ ಈ ಅವಘಡ ಸಂಭವಿಸಿದೆ.
ಗೋಪಿ ಮತ್ತು ಶೀಲಾ ದಂಪತಿ ಮಗಳು ಕುಸುಮಳನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಹೋಗುವಾಗ ತುಂಡಾದ ವಿದ್ಯುತ್ ಕಂಬವು ಅವರ ಸ್ಕೂಟರ್ ಮೇಲೆ ಬಿದ್ದಿದೆ. ವಿದ್ಯುತ್ ಕಂಬದ ಮೇಲೆ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರು ಮೇಲಿನಿಂದ ಕೆಳಕ್ಕೆ ಬಿದ್ದಿದ್ದಾರೆ.
ಘಟನೆ ಸಂಬಂಧ ಗ್ರಾಮಾಂತರ ಠಾಣೆ ಪೊಲೀಸರು ಹಾಗೂ ಬೆಸ್ಕಾಂ ಇಲಾಖೆ ಎಂಜಿನಿಯರ್ಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.