ಕನಕಪುರ: ಮೇಕೆದಾಟು ಜಲಾಶಯ ನಿರ್ಮಾಣ ವಿರೋಧಿಸಿ ತಮಿಳುನಾಡು ರೈತ ಸಂಘಟನೆಗಳು ಪ್ರತಿಭಟನೆ ನಡೆಸಲು ಸಂಚು ರೂಪಿಸಿದ್ದನ್ನು ಖಂಡಿಸಿ ರೈತ ಸಂಘಟನೆ ಮತ್ತು ಕನ್ನಡಪರ ಸಂಘಟನೆಗಳು ಭಾನುವಾರ ಸಾಂಕೇತಿಕ ಪ್ರತಿಭಟನೆ ನಡೆಸಿದರು.
ಇಲ್ಲಿನ ಚನ್ನಬಸಪ್ಪ ವೃತ್ತದಲ್ಲಿ ಪ್ರತಿಭಟನಾಕಾರರು ಜಮಾವಣೆಗೊಂಡು ಮಾತನಾಡಿ, ‘ಕರ್ನಾಟಕ ಮತ್ತು ಕಾವೇರಿ ನೀರಿಗೆ ಸಂಬಂಧಿಸಿದಂತೆ ನಿರಂತರವಾಗಿ ಕಿರುಕುಳ ನೀಡುತ್ತಾ ತೊಂದರೆ ಕೊಡುತ್ತಾ ಬಂದಿದೆ. ಇದಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರವು ಶಾಶ್ವತ ಪರಿಹಾರ ನೀಡಬೇಕಿದೆ’ ಎಂದು ಒತ್ತಾಯಿಸಿದರು.
‘ನ್ಯಾಯಯುತವಾಗಿ ನಮ್ಮ ರಾಜ್ಯದಲ್ಲಿ ನಮ್ಮ ಪಾಲಿನ ನೀರನ್ನು ನಾವು ಬಳಸಿಕೊಳ್ಳಲು ಬಿಡದೆ ಸದಾ ತಮಿಳುನಾಡು ಅಡ್ಡಗಾಲು ಆಗುತ್ತಿದೆ. ಸರ್ಕಾರವು ಇದಾವುದನ್ನು ಲೆಕ್ಕಿಸದೆ ಕೈಗೆತ್ತಿಗೊಂಡಿರುವ ಮೇಕೆದಾಟು ಜಲಾಶಯ ನಿರ್ಮಾಣವನ್ನು ಶೀಘ್ರವಾಗಿ ಪ್ರಾರಂಭಿಸಿ ಪೂರ್ಣಗೊಳಿಸಬೇಕು’ ಎಂದು ಆಗ್ರಹಿಸಿದರು.
‘ಕಾವೇರಿ ವಿಚಾರವಾಗಿ ಸದಾ ತಗಾದೆ ತೆಗೆಯುತ್ತಿರುವ ತಮಿಳುನಾಡಿಗೆ ಮುಂದೆಂದು ಕಾವೇರಿ ವಿಚಾರವಾಗಿ ಬರದಂತೆ ಮಾಡಬೇಕು. ಕಾವೇರಿ ನೀರು ನಮ್ಮದು, ಅದಕ್ಕಾಗಿ ಎಂಥ ಹೋರಾಟ ಎದುರಾದರು ಅದಕ್ಕೆ ನಾವು ಸಿದ್ಧರಿದ್ದೇವೆ’ ಎಂದು ಎಚ್ಚರಿಸಿದರು.