ರಾಮನಗರ: ಜಿಲ್ಲೆಗೆಕೋವಿಡ್-19 ಸೋಂಕು ಹರಡಲು ಬಿಜೆಪಿ ಸರ್ಕಾರವೇ ನೇರ ಕಾರಣ. ಇದರ ನೈತಿಕ ಹೊಣೆ ಹೊತ್ತು ಉಪ ಮುಖ್ಯಮಂತ್ರಿಯೂ ಆದ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥನಾರಾಯಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್. ರವಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
'ಅವರಂಥ ಅಸಮರ್ಥ, ನಾಲಾಯಕ್ ಸಚಿವ ಮತ್ತೊಬ್ಬರಿಲ್ಲ. ಹಸಿರು ವಲಯದಲ್ಲಿದ್ದ ರಾಮನಗರಕ್ಕೆ ಸೋಂಕು ಹರಡಲು ಅವರ ನಿರ್ಧಾರವೇ ಕಾರಣ' ಎಂದು ದೂರಿದರು.
'ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆಯು ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ ಎಂಬ ಕಾರಣಕ್ಕೆ ಅಲ್ಲಿ ಕೋವಿಡ್ -19 ಆಸ್ಪತ್ರೆ ಸ್ಥಾಪನೆಗೆ ಇದೇ ಸಚಿವರು ಬಿಡಲಿಲ್ಲ. ಹೀಗಿರುವಾಗ ರಾಮನಗರ ಜಿಲ್ಲೆಗೆ ಪಾದರಾಯನಪುರ ಆರೋಪಿಗಳನ್ನು ಕರೆ ತರಲು ಒಪ್ಪಿದ್ದು ಏಕೆ' ಎಂದು ಪ್ರಶ್ನಿಸಿದರು.
ಕಿಕ್ ಬ್ಯಾಕ್: ಅಶ್ವತ್ಥ ನಾರಾಯಣ ಐ.ಟಿ. ಬಿ.ಟಿ. ಕಂಪನಿಗಳಿಂದ ಶೇ 10 ರಷ್ಟು ಕಿಕ್ ಬ್ಯಾಕ್ ಪಡೆದು ಐ.ಟಿ. ಕಂಪನಿಗಳಲ್ಲಿ ಶೇ 33 ಸಿಬ್ಬಂದಿ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಡಲು ಮುಂದಾಗಿದ್ದರು ಎಂದು ರವಿ ದೂರಿದರು.
ವಿಧಾನ ಪರಿಷತ್ ಸದಸ್ಯ ಸಿ.ಎಂ. ಲಿಂಗಪ್ಪ ಮಾತನಾಡಿ ' ರಾಮನಗರದಲ್ಲಿ ಬಿಜೆಪಿಗೆ ನೆಲೆ ಇಲ್ಲ. ಹೀಗಾಗಿ ಇಲ್ಲಿನವರು ಸತ್ತರೆ ಸಾಯಲಿ ಎಂಬ ದುರುದ್ದೇಶದಿಂದ ಸರ್ಕಾರ ಹಾಗೂ ಸಚಿವರು ಆರೋಪಿಗಳನ್ನು ಇಲ್ಲಿನ ಜೈಲಿಗೆ ಸ್ಥಳಾಂತರ ಮಾಡಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.