ರಾಮನಗರ: ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥನಾರಾಯಣ ಹಾಗೂ ರೇಷ್ಮೆ ಅಭಿವೃದ್ಧಿ ಕೈಗಾರಿಕೆಗಳ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಗೌತಮ್ ಗೌಡ ಅವರ ವಿರುದ್ಧ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರೇ ಭಾನುವಾರ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಬಳಿಯ ಪಂಚಮುಖಿ ಆಂಜನೇಯಸ್ವಾಮಿ ದೇವಾಲಯದ ಮುಂಭಾಗ ಬಿಜೆಪಿ ಮುಖಂಡರು ಹಾಗೂ ಸದಸ್ಯರು, ‘ರಾಮನಗರ ಬಿಜೆಪಿ ಉಳಿಸಿ’ ಎಂದು ಆಗ್ರಹಿಸಿ ಮೌನ ಪ್ರತಿಭಟನೆ ನಡೆಸಿದರು. ಸಚಿವರ ವಿರುದ್ಧ ಹಲವಾರು ಆರೋಪಗಳ ಕರಪತ್ರ ವನ್ನೂ ಬಿಡುಗಡೆ ಮಾಡಿದರು.
‘ಸಚಿವ ಅಶ್ವತ್ಥನಾರಾಯಣ ಅವರು ಸ್ಥಳೀಯ ಕಾರ್ಯಕರ್ತ ರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಮತ್ತು ಪ್ರಾಮಾಣಿಕರಿಗೆ ಅವಕಾಶ ನೀಡುತ್ತಿಲ್ಲ. ರಾಮನಗರ ಜಿಲ್ಲೆಯಲ್ಲಿ ಈವರೆಗೆ ಸುಸಜ್ಜಿತ ಬಿಜೆಪಿ ಕಚೇರಿಯನ್ನು ಸ್ಥಾಪಿಸಲು ಆಗಿಲ್ಲ. ಅವರ ನಿರ್ಲಕ್ಷ್ಯದಿಂದಲೇ ರಾಮನಗರ ನಗರಸಭೆಯಲ್ಲಿ ಪಕ್ಷ ನಾಲ್ಕನೇ ಸ್ಥಾನಕ್ಕೆ ಕುಸಿಯಿತು’ ಎಂದೂ ಆರೋಪಿಸಿದ್ದಾರೆ.