ಉಯ್ಯಂಬಳ್ಳಿ (ಕನಕಪುರ): ಇಲ್ಲಿನ ಉಯ್ಯಂಬಳ್ಳಿ ಹೋಬಳಿ ಕೋಟೆಕೊಪ್ಪ ಬೋರೆಹೊಲ ಕ್ಷೇತ್ರದ ಶ್ರೀ ಶಂಭುನಾಗಲಿಂಗೇಶ್ವರ ಸ್ವಾಮಿಯ ದಸರಾ ಉತ್ಸವ ಬಹಳ ವಿಜೃಂಭಣೆಯಿಂದ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ದಸರಾ ಉತ್ಸವದ ಅಂಗವಾಗಿ ಶಂಭುನಾಗಲಿಂಗೇಶ್ವರ ಸ್ವಾಮಿಗೆ ರುದ್ರಾಭಿಷೇಕ, ಸಹಸ್ರನಾಮ ಬಿಲ್ವಾರ್ಚನೆ, ಪುಷ್ಪಾರ್ಚನೆ, ಮಹಾ ಮಂಗಳಾರತಿ ನೆರವೇರಿತು.
ಕ್ಷೇತ್ರದ ರಾಜುಸ್ವಾಮಿ ಅವರು ಬನ್ನಿಮಂಟಪಕ್ಕೆ ಮತ್ತು ಆಯುಧಗಳಿಗೆ ಹಾಗೂ ಶಂಭುನಾಗಲಿಂಗೇಶ್ವರಸ್ವಾಮಿಯ ರಥಕ್ಕೆ ಪೂಜೆಯನ್ನು ನೆರವೇರಿಸಿದರು.
ಕ್ಷೇತ್ರದ ಹೆಬ್ಬಾಗಿಲಿನ ಬನ್ನಿಮಂಟಪದಿಂದ ಶರಣರ ಸನ್ನಿಧಿವರೆಗೆ ಸ್ವಾಮಿಯ ಅದ್ದೂರಿ ಮೆರವಣಿಗೆ ಉತ್ಸವ ನಡೆಯಿತು. ಬಯ್ಯನದೊಡ್ಡಿ ರೇವಣ್ಣ ತಂಡ ಪೂಜಾ ಕುಣಿತ, ಅಚ್ಚಲಿನ ರಾಜು ತಂಡ ತಮಟೆವಾದನ, ಹಲಗೂರಿನ ನಾಗರಾಜು ತಂಡ ವೀರಗಾಸೆ ನೃತ್ಯವನ್ನು ವೈಭವದಿಂದ ನಡೆಸಿಕೊಟ್ಟರು.
ಶಂಭುನಾಗಲಿಂಗೇಶ್ವರರ ನೂರಾರು ಭಕ್ತರು ದಸರಾ ಉತ್ಸವದಲ್ಲಿ ಪಾಲ್ಗೊಂಡು ಉಘೇ ಉಘೇ ಜಯಘೋಷದೊಂದಿಗೆ ಸ್ವಾಮಿಯ ಆಶೀರ್ವಾದ ಪಡೆದರು.
ತುಪ್ಪದ ಜ್ಯೋತಿಯನ್ನು ಅಂಗೈಲ್ಲಿಟ್ಟು ಗುಡಿಸುತ್ತಲು ವಾದ್ಯಗೋಷ್ಠಿಗಳೊಂದಿಗೆ ಭಕ್ತರು ಪ್ರದಕ್ಷಿಣೆ ಮಾಡಿದರು. ನೆರೆದಿದ್ದ ಭಕ್ತರಿಗೆ ದೇವಾಲಯದ ವತಿಯಿಂದ ಅನ್ನಸಂತರ್ಪಣೆ ಮಾಡಿದ್ದು ಭಕ್ತರೆಲ್ಲರೂ ಸಹಪಂಕ್ತಿಯಲ್ಲಿ ಕುಳಿತು ಪ್ರಸಾದವನ್ನು ಸ್ವೀಕರಿಸಿದರು.