ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಡತನದಲ್ಲಿ ಅರಳಿದ ಉರಗಹಳ್ಳಿಯ ಐಎಎಸ್‌ ಶಿವರಾಮ್...

Published 1 ಮಾರ್ಚ್ 2024, 6:14 IST
Last Updated 1 ಮಾರ್ಚ್ 2024, 6:14 IST
ಅಕ್ಷರ ಗಾತ್ರ

ರಾಮನಗರ: ಕನ್ನಡದಲ್ಲಿ ಐಎಎಸ್ ಪರೀಕ್ಷೆ ಬರೆದು ಉತ್ತೀರ್ಣರಾದ ಮೊದಲಿಗರಾಗಿ ತಾಲ್ಲೂಕಿಗೆ ಕೀರ್ತಿ ತಂದಿದ್ದ ಕೆ. ಶಿವರಾಮ್ ತಾಲ್ಲೂಕಿನ ಬಿಡದಿ ಹೋಬಳಿಯ ಉರಗಹಳ್ಳಿಯವರು. ರಾಜ್ಯವೇ ತಿರುಗಿ ನೋಡುವಂತಹ ಸಾಧನೆ ಮಾಡಿದ್ದ ತಮ್ಮೂರಿನ ನಿವೃತ್ತ ಐಎಎಸ್ ಅಧಿಕಾರಿಯ ಸಾವಿಗೆ ಜನ ಕಂಬನಿ ಮಿಡಿದಿದ್ದಾರೆ. ಇಡೀ ಊರನ್ನು ನೀರವ ಮೌನ ಆವರಿಸಿದೆ.

ಕೆಂಪಯ್ಯ ಮತ್ತು ಚಿಕ್ಕಬೋರಮ್ಮ ದಂಪತಿಗೆ 1953 ಏಪ್ರಿಲ್ 6ರಂದು ಶಿವರಾಮ್ ಜನಿಸಿದ್ದರು. ತೀರಾ ಬಡತನದ ಕುಟುಂಬ ಅವರದ್ದಾಗಿತ್ತು. 4ನೇ ತರಗತಿವರೆಗೆ ಸಮೀಪದ ಮೇಗಳದೊಡ್ಡಿಯ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ್ದ ಅವರು, ನಂತರ ರಾಮನಹಳ್ಳಿ ಆಶ್ರಮದಲ್ಲಿದ್ದುಕೊಂಡು ಭೈರಮಂಗಲದ ವೃಷಭಾವತಿ ಗ್ರಾಮಾಂತರ ಶಾಲೆಯಲ್ಲಿ 5ರಿಂದ 7ನೇ ತರಗತಿವರೆಗೆ ಓದಿದ್ದರು.

ಬೆಂಗಳೂರಿನ ಮಲ್ಲೇಶ್ವರದಲ್ಲಿ ಮೆಟ್ರಿಕ್ ಪೂರ್ವ ಮತ್ತು ನಂತರದ ಶಿಕ್ಷಣವನ್ನು ಪೂರ್ಣಗೊಳಿಸಿದ ಅವರು, 1973ರಲ್ಲಿ ಪೊಲೀಸ್ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದರು. ಕೆಲಸ ಮಾಡುತ್ತಲೇ ವಿ.ವಿ. ಪುರಂ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ದೂರ ಶಿಕ್ಷಣದ ಮೂಲಕ ಪದವಿ ಮತ್ತು 1982ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದರು.

ಕಾಲೇಜು ದಿನಗಳಲ್ಲೇ ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಆಸಕ್ತಿ ಬೆಳೆಸಿಕೊಂಡಿದ್ದ ಅವರು, ನಿರಂತರ ಅಧ್ಯಯನ ಮಾಡುತ್ತಿದ್ದರು. 1985ರಲ್ಲಿ ಕೆಎಎಸ್ ಪಾಸಾದರೂ ಸುಮ್ಮನೆ ಕೂರದೆ, ಐಎಎಸ್ ಹುದ್ದೆಯ ಗುರಿಯತ್ತ ದೃಷ್ಟಿ ನೆಟ್ಟರು. ಛಲದಂಕಮಲ್ಲನಂತೆ ಓದಿ ಗುರಿ ಸಾಧಿಸಿದರು. ರಾಜ್ಯದಲ್ಲಿ ಕನ್ನಡದಲ್ಲಿ ಐಎಎಸ್ ಪರೀಕ್ಷೆ ಬರೆದು ಪಾಸು ಮಾಡಿದ ಮೊದಲಿಗನೆಂಬ ಸಾಧನೆ ಮಾಡಿದರು ಎನ್ನುತ್ತಾರೆ ಗ್ರಾಮದಲ್ಲಿರುವ ಶಿವರಾಮ್ ಒಡನಾಡಿಗಳು.

ಮಹಾ ತುಂಟ: ‘ಶಿವರಾಮ್ ಮಹಾ ತುಂಟ. ಜೊತೆಗೆ ಅಷ್ಟೇ ಬುದ್ಧಿವಂತ ಕೂಡ. ಕಷ್ಟಕ್ಕೆ ಮಿಡಿಯುವ ಜೀವ. ಯಾರಿಗೇ ಆದರೂ ತಮ್ಮ ಕೈಲಾದ ಸಹಾಯ ಮಾಡುವ ಸ್ವಭಾವ. ಅಂತಹ ತುಂಟನೊಬ್ಬ ಅತ್ಯುನ್ನತ ಐಎಎಸ್ ಪರೀಕ್ಷೆ ಪಾಸು ಮಾಡಿ, ಇಡೀ ರಾಜ್ಯಕ್ಕೆ ಹೆಮ್ಮೆ ತಂದಿದ್ದ. ಅಧಿಕಾರದಲ್ಲಿದ್ದಾಗಲೂ ಬಡವರ ಕಷ್ಟಗಳಿಗೆ ಮಿಡಿದಿದ್ದ. ಆತನ ಸಾವು ನಿಜಕ್ಕೂ ಆಘಾತ ತಂದಿದೆ’ ಎಂದು ಅವರ ಬಾಲ್ಯ ಸ್ನೇಹಿತ ಉರಗಹಳ್ಳಿಯ ಕಂಚಿ ವರದಯ್ಯ ಶಿವರಾಮ್ ಅವರನ್ನು ನೆನೆದು ಗದ್ಗದಿತರಾದರು.

‘ಬಾಲ್ಯದಲ್ಲಿ ಸ್ನೇಹಿತರನ್ನು ಹೆಚ್ಚು ತಮಾಷೆ ಮಾಡುತ್ತಾ ಕಾಡುತ್ತಿದ್ದ ಶಿವರಾಮ್, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದ. ಪೌರಾಣಿಕ ನಾಟಕ ಕಲಿಸುವ ಮೇಸ್ಟ್ರು ಆಗಿದ್ದ ಅವರ ತಂದೆ ಕೆಂಪಯ್ಯ ಅವರಿಗೆ ಇದರಿಂದ ತುಂಬಾ ಬೇಸರವಾಗಿತ್ತು. ಆಗ ನನ್ನನ್ನು ಕರೆದು, ನೀನಾದರೂ ಅವನಿಗೆ ಸ್ವಲ್ಪ ಬುದ್ಧಿ ಹೇಳು ಎಂದಿದ್ದರು. ಎಲ್ಲವೂ ಇಲ್ಲಿಗೇ ಮುಗಿದಿಲ್ಲ, ಮುಂದೆ ನೋಡು ಎಂದಿದ್ದ ಶಿವರಾಮ್, ಮತ್ತೆಂದೂ ಓದಿನಲ್ಲಿ ಹಿಂದುಳಿಯಲಿಲ್ಲ’ ಎಂದು ಮೆಲುಕು ಹಾಕಿದರು.

‘ಶಿವರಾಮ್ ಎಂದಿಗೂ ತಾನು ಬಂದ ಹಾದಿಯನ್ನು ಮರೆತಿರಲಿಲ್ಲ. ಬಡ ಪ್ರತಿಭೆಗಳಿಗೆ ಸ್ಪೂರ್ತಿಯಾಗಿದ್ದ ಆತ, ಬದುಕಿನುದ್ದಕ್ಕೂ ಸಾವಿರಾರು ಮಂದಿಗೆ ನೆರವಾಗಿದ್ದ. ಸ್ನೇಹಿತರೆಂದರೆ ವಿಶೇಷ ಕಾಳಜಿ ತೋರಿಸುತ್ತಿದ್ದ. ಎಷ್ಟೇ ಕಾರ್ಯೋತ್ತಡವಿದ್ದರೂ ಸ್ನೇಹಿತರು ಕರೆ ಮಾಡಿದಾಗ, ಭೇಟಿಗೆ ಹೋದಾಗ ಅಷ್ಟೇ ಪ್ರೀತಿ–ವಿಶ್ವಾಸದಿಂದ ತಮಾಷೆ ಮಾಡಿಕೊಂಡು ಮಾತನಾಡಿಸುತ್ತಿದ್ದ. ಕಷ್ಟ–ಸುಖ ವಿಚಾರಿಸುತ್ತಿದ್ದ. ಅಂತಹ ಸ್ನೇಹಿತ ಈಗ ಇಲ್ಲವೆಂಬುದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದರುಭಾವುಕರಾದರು.

ರಾಮನಗರ ತಾಲ್ಲೂಕಿನ ಅಂಚೀಪುರ ಗ್ರಾಮದಲ್ಲಿ ಕೆ. ಶಿವರಾಮ್ ಸಾವಿಗೆ ಕಂಬನಿ ಮಿಡಿದ ಗ್ರಾಮಸ್ಥರು
ರಾಮನಗರ ತಾಲ್ಲೂಕಿನ ಅಂಚೀಪುರ ಗ್ರಾಮದಲ್ಲಿ ಕೆ. ಶಿವರಾಮ್ ಸಾವಿಗೆ ಕಂಬನಿ ಮಿಡಿದ ಗ್ರಾಮಸ್ಥರು
ಊರಿನಲ್ಲಿ ಪ್ರೌಢಶಾಲೆ ತೆರೆದಿದ್ದರು
‘ಶಿವರಾಮಣ್ಣ ಅವರು ಓದುವಾಗ ಗ್ರಾಮದಲ್ಲಿ ಪ್ರೌಢಶಾಲೆ ಇರಲಿಲ್ಲ. ಅವರು ಬೆಂಗಳೂರಿನಲ್ಲಿ ಪ್ರೌಢಶಾಲೆ ಮುಗಿಸಿದ್ದರು. ತಮ್ಮೂರಿನಲ್ಲಿ ಪ್ರೌಢಶಾಲೆ ಕೊರತೆಯಿಂದಾಗಿ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿರುವುದನ್ನು ಅರಿತಿದ್ದ ಅವರು ಐಎಎಸ್ ಅಧಿಕಾರಿಯಾದ ಬಳಿಕ ಗ್ರಾಮದಲ್ಲಿ ವಿಶ್ವಚೇತನ ಪ್ರೌಢಶಾಲೆಯನ್ನು ಆರಂಭಿಸಿದರು. ಇದರಿಂದಾಗಿ ಊರಿನ ಮಕ್ಕಳು ಪ್ರೌಢ ಶಿಕ್ಷಣಕ್ಕಾಗಿ ಬಿಡದಿ ಅಥವಾ ದೂರದ ಊರುಗಳಿಗೆ ಹೋಗುವುದು ತಪ್ಪಿತು’ ಎಂದು ಗ್ರಾಮದವರಾದ ಉಪನ್ಯಾಸಕ ಕೃಷ್ಣಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು. ‘ಶಿಕ್ಷಣವೇ ನಮಗಿರುವ ಆಸ್ತಿ ಎಂದು ಹೇಳುತ್ತಿದ್ದರು. ಊರಿಗೆ ಬಂದಾಗ ಯುವಜನರಿಗೆ ಪ್ರೇರಣೆಯ ಮಾತುಗಳನ್ನಾಡುತ್ತಿದ್ದರು. ಏನಾದರೂ ಸಾಧಿಸುವಂತೆ ಹುರಿದುಂಬಿಸುತ್ತಿದ್ದರು. ಬಡವರ ಪರ ಕಾಳಜಿ ಹೊಂದಿದ್ದ ಅವರು ತಮ್ಮ ಅಧಿಕಾರವಾಧಿಯಲ್ಲಿ ಜನಪರವಾಗಿ ಕೆಲಸ ಮಾಡಿದರು’ ಎಂದು ನೆನೆದರು.
ಸ್ವಗ್ರಾಮದಲ್ಲಿ ಅಂತ್ಯ ಸಂಸ್ಕಾರ
ಶಿವರಾಮ್ ಅವರ ಅಂತ್ಯಕ್ರಿಯೆಯು ಉರಗಹಳ್ಳಿಯಲ್ಲಿರುವ ಅವರ ತೋಟದ ಮನೆಯಲ್ಲಿ ನಡೆಯಲಿದೆ. ಐದು ವರ್ಷಗಳ ಹಿಂದೆ ತೀರಿಕೊಂಡಿದ್ದ ಅವರ ತಾಯಿಯ ಅಂತ್ಯಕ್ರಿಯೆಯನ್ನು ತೋಟದಲ್ಲೇ ಮಾಡಲಾಗಿತ್ತು. ಇವರ ಅಂತ್ಯಕ್ರಿಯೆ ಸಹ ಅಲ್ಲಿಯೇ ನಡೆಯಲಿದೆ. ಶಿವರಾಮ್ ಅವರು ನಿಧನರಾದ ಸುದ್ದಿ ಖಚಿತವಾದ ಬಳಿಕ ಪೊಲೀಸರು ಸಹ ತೋಟಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಶುಕ್ರವಾರ ಬೆಂಗಳೂರಿನಿಂದ ಮಧ್ಯಾಹ್ನದ ಹೊತ್ತಿಗೆ ಶವವನ್ನು ಗ್ರಾಮಕ್ಕೆ ತರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT