ಮಾಗಡಿ: ತಿರುಮಲೆ ಮೂಲರಂಗನ ಸನ್ನಿಧಿಯಲ್ಲಿ ಪುರಾತನ ಕಾಲದಿಂದ ನೆಲೆಸಿರುವ ಆದಿಶಕ್ತಿ ಮುಳಕಟ್ಟಮ್ಮದೇವಿ ಜಾತ್ರಾ ಮಹೋತ್ಸವ ಬುಧವಾರ ರಾತ್ರಿ ನಡೆಯಿತು. ಹೊಳೆ ಉತ್ಸವ, ಹೂವು ಹೊಂಬಾಳೆ, ಹಸಿ ತಂಬಿಟ್ಟಿನ ಆರತಿ ನಡೆಯಿತು.
ಮಾಗಡಿ ತಿರುಮಲೆ ರಂಗಯ್ಯ ವಂಶಸ್ಥರು ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಹರಕೆ ತೀರಿಸಿದರು. ವಕೀಲ ಟಿ.ಎಂ.ನಾರಾಯಣಸ್ವಾಮಿ ಮುಳಕಟ್ಟಮ್ಮದೇವಿ ಜಾತ್ರೆ ನಡೆದು ಬಂದ ಮಹತ್ವ ವಿವರಿಸಿದರು.
ಪ್ರಧಾನ ಅರ್ಚಕ ಟಿ.ಎಂ.ಶ್ರೀನಿವಾಸ್, ಅರ್ಚಕರಾದ ಗೋವಿಂದ ರಾಜು, ಕೃಷ್ಣಕುಮಾರ್ ಪೂಜಾ ವಿಧಿಗಳನ್ನು ನಡೆಸಿಕೊಟ್ಟರು.
ತಡರಾತ್ರಿ ದೇವಿಯ ಅಲಂಕೃತ ಉತ್ಸವ ಮೂರ್ತಿಯನ್ನು ವಿವಿಧ ಜನಪದ ವಾದ್ಯಗಳೊಂದಿಗೆ ತಿರುಮಲೆಯಲ್ಲಿ ಮೆರವಣಿಗೆ ನಡೆಸಲಾಯಿತು. ಸಾಮೂಹಿಕ ಅನ್ನದಾನ ನಡೆಯಿತು.
ಭಕ್ತ ಮಂಡಳಿಯ ರಾಮಕೃಷ್ಣಪ್ಪ, ಸುಶೀಲಮ್ಮ, ರುಕ್ಮಿಣಿ, ಆರ್.ಮಂಜುಳ, ರಾಧಾ, ರತ್ನಮ್ಮ, ಬಿ.ಮಂಜುಳ ಹಾಗೂ ಭಕ್ತರು ಇದ್ದರು.