ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಯ ಗುಣಪಡಿಸಬಹುದು; ಆತಂಕ ಬೇಡ

ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಜಾಗೃತಿ ಕಾರ್ಯಕ್ರಮ
Last Updated 5 ಡಿಸೆಂಬರ್ 2019, 13:15 IST
ಅಕ್ಷರ ಗಾತ್ರ

ಕನಕಪುರ: ಕ್ಷಯರೋಗ ವಾಸಿಯಾಗುವ ಕಾಯಿಲೆ. ಅಂತಹ ರೋಗಿಗಳು 6 ತಿಂಗಳ ಕಾಲ ನಿರಂತರವಾಗಿ ಔಷಧ ತೆಗೆದುಕೊಂಡರೆ ಕಾಯಿಲೆಯನ್ನು ಸಂಪೂರ್ಣ ಗುಣಪಡಿಸಬಹುದು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಭುಜಬಲಿ ತಿಳಿಸಿದರು.

ಇಲ್ಲಿನ ಕುರುಪೇಟೆ ಗ್ರಾಮದಲ್ಲಿ ಪರಿಷ್ಕೃತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಲಯನ್ಸ್‌ ಕ್ಲಬ್‌ ಸಹಯೋಗದಲ್ಲಿ ಗುರುವಾರ ನಡೆದ ಸಕ್ರಿಯ ಕ್ಷಯ ರೋಗ ಪತ್ತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

‘ತಾಲ್ಲೂಕಿನಲ್ಲಿ ಒಟ್ಟು 3.9 ಲಕ್ಷ ಜನರಿದ್ದಾರೆ. ಅವರಲ್ಲಿ ಶೇಕಡ 20ರಷ್ಟು ಜನರನ್ನು ಸಮೀಕ್ಷೆ ಮಾಡಲಾಗುವುದು. ಅವರಲ್ಲಿ ಪ್ರಮುಖವಾಗಿ ಕ್ಷಯರೋಗ ಪೀಡಿತರು ಇರುವ ಸ್ಥಳಗಳು, ಬೀಡಿ ಕಾರ್ಮಿಕರು, ಇಟ್ಟಿಗೆ ಫ್ಯಾಕ್ಟರಿ, ಗಣಿಗಾರಿಕೆ, ರೇಷ್ಮೆ ನೂಲು ಬಿಚ್ಚುವ ಸ್ಥಳಗಳಲ್ಲಿನ ಜನರನ್ನು ನಮ್ಮ ತಂಡವು ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ’ ಎಂದು ಹೇಳಿದರು.

‘ಈ ಒಂದು ಕಾರ್ಯಕ್ಕೆ 150 ತಂಡಗಳು ಕನಕಪುರ ತಾಲ್ಲೂಕಿನಲ್ಲಿ ಸರ್ವೇ ಕಾರ್ಯ ನಿರ್ವಹಿಸುತ್ತಿದ್ದು ನ. 25 ರಿಂದ ಡಿ.10 ರವರೆಗೆ ನಡೆಯಲಿದೆ. ಈಗಾಗಲೆ ಕ್ಷಯ ರೋಗ ಇರುವ ಮೂವರು ವ್ಯಕ್ತಿಗಳು ಪತ್ತೆಯಾಗಿದ್ದಾರೆ.ಹೊಸದುರ್ಗ, ದೊಡ್ಡ ಆಲಹಳ್ಳಿ, ಹಾರೋಹಳ್ಳಿ ಉಳಿದಂತೆ ಕ್ಷಯರೋಗಕ್ಕೆ ಸಂಬಂಧಿಸಿದಂತ ಲಕ್ಷಣಗಳು ಕಂಡು ಬಂದಲ್ಲಿ ಸ್ಥಳದಲ್ಲೇ ಅವರಿಂದ ಕಫವನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುವುದು’ ಎಂದರು.

ಕ್ಷಯ ರೋಗ ಪೀಡಿತರಿರಿಗೆ ಪ್ರತಿ ತಿಂಗಳು ₹ 500 ಮತ್ತು ತಿಂಗಳಿಗೆ ಆಗುವಷ್ಟು ಮಾತ್ರೆಯನ್ನು ನಮ್ಮ ಆಶಾ ಅಥವಾ ಆಸ್ಪತ್ರೆಯ ಸಿಬ್ಬಂದಿ ಕೊಡುತ್ತಾರೆ.ರೋಗಕ್ಕೆ ತುತ್ತಾದವರು ಯಾವುದೆ ರೀತಿಯ ಭಯಪಡುವ ಅವಶ್ಯಕತೆಯಿಲ್ಲ, ನಾವು ನೀಡಿದ ನಿರ್ದೇಶನದಂತೆ ಮಾತ್ರೆ ಮತ್ತು ಪೌಷ್ಟಿಕ ಆಹಾರ ಸೇವಿಸಿದರೆ 6 ತಿಂಗಳಲ್ಲಿ ನಿಮ್ಮ ಕಾಯಿಲೆ ಗುಣವಾಗಲಿದೆ. ಔಷಧವನ್ನು ಸರ್ಕಾರವೇ ಮನೆ ಬಾಗಿಲಿಗೆ ಉಚಿತವಾಗಿ ನೀಡುವುದಲ್ಲದೆ, ಪೌಷ್ಟಿಕ ಆಹಾರ ಸೇವೆನೆಗಾಗಿ ತಿಂಗಳಿಗೆ ₹ 500ರಂತೆ 6 ತಿಂಗಳು ₹ 3 ಸಾವಿರ ನೀಡಲಿದೆ ಎಂದರು.

ಲಯನ್ಸ್‌ ಜಿಲ್ಲಾ ಕ್ಷಯರೋಗ ನಿರ್ಮೂಲನೆ ಅಧ್ಯಕ್ಷ ಚಿಕ್ಕೆಂಪೇಗೌಡ ಮಾತನಾಡಿ, ‘ತಾಲ್ಲೂಕಿನಲ್ಲಿ 200ಕ್ಕೂ ಹೆಚ್ಚು ಕ್ಷಯರೋಗ ಬಾಧಿತರು ಇದ್ದಾರೆ. ಇವರಿಗೆ ನಿರಂತರವಾಗಿ ಔಷಧ ಕೊಡುತ್ತಿದ್ದು ಅವರಲ್ಲಿ ಕಾಯಿಲೆ ವಾಸಿಯಾಗುತ್ತಿದೆ. ಹೊಸದಾಗಿ ಪತ್ತೆಯಾಗುವ ರೋಗಿಗಳಿಗೂ ತಕ್ಷಣದಿಂದಲೇ ಔಷಧ ಕೊಡುತ್ತೇವೆ’ ಎಂದರು.

‘ದೇಶವನ್ನು ಕ್ಷಯರೋಗ ಮುಕ್ತ ಮಾಡುವುದೇ ನಮ್ಮೆಲ್ಲರ ಗುರಿ. ಇದಕ್ಕೆ ಪರಿಷ್ಕೃತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮ ನಡೆಯುತ್ತಿದ್ದು ನಮ್ಮ ಲಯನ್ಸ್‌ ಸಂಸ್ಥೆಯು ಇದರ ಜತೆಗೆ ಕೈ ಜೋಡಿಸಿ ಕೆಲಸ ಮಾಡುತ್ತಿದೆ’ ಎಂದರು.

ಲಯನ್ಸ್‌ ಪಶುವೈದ್ಯ ಚಿಕಿತ್ಸೆ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಸ್‌.ನಿಂಗರಾಜಯ್ಯ, ಲಯನ್ಸ್‌ ಕ್ಲಬ್‌ ಕ್ಯಾಂಪಸ್‌ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಯು.ಸಿ.ಕುಮಾರ್‌, ಪರಿಷ್ಕೃತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮದ ಮೇಲ್ವಿಚಾರಕರಾದ ಲೋಕೇಶ್‌, ಕೆ.ಎಸ್‌.ಶಿವಶೇಖರ್‌ ಹಾಗೂ ಆಸ್ಪತ್ರೆಯ ಕಿರಿಯ ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು ಸರ್ವೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT