ರಾಮನಗರ:ಸರ್ಕಾರದ ಆದೇಶದ ನಡುವೆಯೂ ಜಿಲ್ಲೆಯಲ್ಲಿನ ಎ ದರ್ಜೆಯ ದೇಗುಲಗಳು ಸೋಮವಾರ ಬಾಗಿಲು ತೆರೆದಿಲ್ಲ. ಬಿ ಹಾಗೂ ಸಿ ದರ್ಜೆಯ ದೇಗುಲಗಳಲ್ಲಷ್ಟೇ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.
ಕಬ್ಬಾಳು, ಕೆಂಗಲ್ ಆಂಜನೇಯ, ಮಾಗಡಿ ರಂಗನಾಥಸ್ವಾಮಿ, ಚನ್ನಪಟ್ಟಣದ ಅಪ್ರಮೇಯಸ್ವಾಮಿ ಸೇರಿದಂತೆ ಪ್ರಮುಖ ದೇಗುಲಗಳ ಬಾಗಿಲು ಮುಚ್ಚಿವೆ. ಈ ದೇವಾಲಯಗಳ ಆರಂಭಕ್ಕೆ ಜಿಲ್ಲಾಡಳಿತ ಇನ್ನೂ ಅನುಮತಿ ನೀಡಿಲ್ಲ.
ಸರ್ಕಾರದ ಆದೇಶ ನೋಡಿಕೊಂಡು, ಉಳಿದ ದೇಗುಲಗಳಲ್ಲಿ ಭಕ್ತರ ಪ್ರತಿಕ್ರಿಯೆ ಆಧರಿಸಿ ಅನುಮತಿ ಬಗ್ಗೆ ನಿರ್ಧರಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಟ್ಟ 865 ದೇವಾಲಯಗಳಿವೆ. ಅದರಲ್ಲಿ 7 ಎ ದರ್ಜೆ, 3 ಬಿ ದರ್ಜೆ ಹಾಗು ಉಳಿದ 855 ದೇಗುಲಗಳು ಸಿ ದರ್ಜೆಗೆ ಸೇರಿವೆ.