ಮಾಗಡಿ: ಸಾವನದುರ್ಗದ ಸರಪಳಿ ಕೋಟೆಯ ಗೋಡೆ ಶುಕ್ರವಾರ ಕುಸಿದಿದ್ದು, ಕೂದಲೆಳೆಯ ಅಂತರದಲ್ಲಿ ಅನಾಹುತ ತಪ್ಪಿದೆ ಎಂದು ಗುಲಾಮ್ ಶಾಖಾದ್ರಿ ದರ್ಗಾದ ಮೌಲ್ವಿ ಗುಲ್ಜಾರ್ ಷರೀಫ್ ತಿಳಿಸಿದರು.
ಗುರುವಾರ ರಾತ್ರಿ ಸಾವನದುರ್ಗದ ಸುತ್ತ ಮಳೆ ಸುರಿದಿತ್ತು. ದುರ್ಗದಲ್ಲಿ ನಾಯಕನಪಾಳ್ಯದ ಪಾಳೇಗಾರ ಸಂಪಾಜೆರಾಯ, ಸಾವಂದರಾಯ ಸಹೋದರರು ಕೋಟೆ ನಿರ್ಮಿಸಿದ್ದರು. ಕೆಂಪೇಗೌಡರ ವಂಶಜರು ಮಣ್ಣಿನ ಕೋಟೆಯ ಹೊರಮೈಗೆ ಕಲ್ಲು ಕಟ್ಟಿಸಿದ್ದ ಸಾವನದುರ್ಗದ ಏಳುಸುತ್ತಿನ ಕೋಟೆಯ ಗೊಡೆ ಕುಸಿದು ಬಿದ್ದಿದೆ.
ಪ್ರವಾಸಿಗರು ಕೂದಲೆಳೆಯ ಅಂತರದಲ್ಲಿ ಪಾರಾದರು. ರಜಾ ದಿನಗಳಲ್ಲಿ ಸಾವನದುರ್ಗಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಕೋಟೆಯ ಗೋಡೆ ಮೇಲೆ ಹತ್ತದಂತೆ ತಾಲ್ಲೂಕು ಆಡಳಿತ ಎಚ್ಚರಿಕೆ ನೀಡಬೇಕು. ಬಿದ್ದಿರುವ ಕೋಟೆಯ ಗೋಡೆ ದುರಸ್ತಿಪಡಿಸಲು ಜಿಲ್ಲಾಡಳಿತ ಮುಂದಾಗಬೇಕು. ಅಗತ್ಯ ಸಂರಕ್ಷಣೆಗೆ ಒತ್ತು ನೀಡಬೇಕು ಎಂದು ಮನವಿ ಮಾಡಿದರು.