ಚನ್ನಪಟ್ಟಣ: ಪಾಶ್ಚಿಮಾತ್ಯ ಸಂಸ್ಕೃತಿಗೆ ತಲೆದೂಗದೆ ವಿದ್ಯಾರ್ಥಿ ಜೀವನವನ್ನು ಉತ್ತಮ ಭವಿಷ್ಯಕ್ಕೆ ಸೋಪಾನ ಮಾಡಿಕೊಳ್ಳಬೇಕು ಎಂದು ಡಿವೈಎಸ್ಪಿ ಕೆ.ಎನ್. ರಮೇಶ್ ಕಿವಿಮಾತು ಹೇಳಿದರು.
ಚನ್ನಾಂಬಿಕ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣವೆಂಬುದು ಸಂಸ್ಕಾರಯುತ ಬದುಕಿನ ಜೀವನಾಡಿ. ಪೋಷಕರ, ಗುರು, ಹಿರಿಯರ ಬಗೆಗೆ ಗೌರವ ಬೆಳೆಸಿಕೊಳ್ಳುವ ಮೂಲಕ ಆದರ್ಶ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು ಎಂದರು.
ವಿದ್ಯಾರ್ಥಿಗಳು ಪೋಷಕರ ಕನಸನ್ನು ನನಸುಗೊಳಿಸುವ ಸದಾವಕಾಶವನ್ನು ಕಳೆದುಕೊಳ್ಳಬಾರದು. ನಾಡು, ನುಡಿಯ ಬಗೆಗೆ ಅಭಿಮಾನ ಹಾಗೂ ದೇಶಪ್ರೇಮ ಮೂಡಿಸಿಕೊಂಡು ಸಮಾಜದ ಅತ್ಯಮೂಲ್ಯ ಆಸ್ತಿಯಾಗಿ ಮಿನುಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಚನ್ನಾಂಬಿಕಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಪೂರ್ಣಿಮಾ ನಿಂಗೇಗೌಡ ಮಾತನಾಡಿದರು. ಉಪ ಪ್ರಾಂಶುಪಾಲ ಎಚ್.ಕೆ. ದಿನೇಶ್, ಆಡಳಿತಾಧಿಕಾರಿ ಅ.ಮಾ. ರುದ್ರಮಾದಪ್ಪ ಇದ್ದರು.