ಮಾಗಡಿ: ‘ಮಹಿಳೆಯರು ಮನೆಯಿಂದ ಹೊರ ಬಂದು, ವಿವಿಧ ಸರ್ಕಾರಿ ಕಚೇರಿಗಳಲ್ಲಿನ ತಮ್ಮ ಕೆಲಸಗಳನ್ನು ತಾವೇ ನಿರ್ವಹಿಸಬೇಕು ಹಾಗೂ ಅಲ್ಲಿನ ದೈನಂದಿನ ಕೆಲಸಗಳ ಬಗ್ಗೆ ಸಾಮಾನ್ಯ ಜ್ಞಾನ ಬೆಳೆಸಿಕೊಳ್ಳಬೇಕು’ ಎಂದು ಜ್ಞಾನವಿಕಾಸ ಸಮನ್ವಯಾಧಿಕಾರಿ ಕವಿತಾ ತಿಳಿಸಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದ ಅಂಗವಾಗಿ ನ್ಯಾಯಾಲಯ, ಅಗ್ನಿಶಾಮಕ ಠಾಣೆ, ಸರ್ಕಾರಿ ಆಯರ್ವೇದ ಆಸ್ಪತ್ರೆಗಳ ಅಧ್ಯಯನ ಪ್ರವಾಸಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಜೆಎಂಎಫ್ಸಿ ನ್ಯಾಯಾಲಯದ ಕಲಾಪಗಳನ್ನು ವೀಕ್ಷಣೆ ಮಾಡುವುದರಿಂದ, ನ್ಯಾಯಾಲಯದ ರೀತಿ ರಿವಾಜುಗಳು ಅರ್ಥವಾಗುತ್ತವೆ. ಅಗ್ನಿ ಅವಘಡಗಳು ಸಂಭವಿಸಿದಲ್ಲಿ, ಕೂಡಲೆ ಕೈಗೊಳ್ಳಬಹುದಾದ ತುರ್ತು ಕಾರ್ಯಗಳ ಬಗ್ಗೆ ಅಗ್ನಿ ಶಾಮಕ ಠಾಣೆಯಲ್ಲಿ ಮಾಹಿತಿ ಪಡೆಯಬಹುದು. ದೇಶೀಯ ಆಯುರ್ವೇದ ಪದ್ಧತಿಯ ಔಷಧಿ ಬಳಕೆ ಬಗೆಗಿನ ಅರಿವು ಅಗತ್ಯವಾಗಿದೆ. ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ದೊರೆಯುವ ಔಷಧಿಗಳನ್ನು ಬಳಕೆ ಮಾಡಿಕೊಳ್ಳುವುದನ್ನು ತಿಳಿಯಬೇಕು’ ಎಂದರು.
ಅಧ್ಯಯನ ಪ್ರವಾಸದ ಸಂಯೋಜಕಿ ಪ್ರಭಾವತಿ, ಸಂಘದ ಸದಸ್ಯರಾದ ನಗೀನ ತಾಜ್, ಶಬೀನ, ಅಸ್ಮ , ಬಿ.ಬಿ.ಹಾಜಿರಾ, ನಾಜೀಮ, ಪರ್ಝಾನ, ಉಮ್ಮೆಸಲ್ಮಾ, ರೇಷ್ಮಾ, ತಬಸುಮ್ ಪ್ರವಾಸದಲ್ಲಿ ಪಡೆದ ಅನುಭವಗಳ ಕುರಿತು ಮಾತನಾಡಿದರು. 40 ಜನ ಸದಸ್ಯರು ಇದ್ದರು.