ರಾಮನಗರ: ಒಳಚರಂಡಿ ಪೈಪ್ಲೈನ್ ಕಾಮಗಾರಿ ವೇಳೆ ಮಣ್ಣಿನ ರಾಶಿ ಕುಸಿದು ಕಾರ್ಮಿಕರಿಬ್ಬರು ಮೃತ ಪಟ್ಟ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ಹಳೇಭೈರೋಹಳ್ಳಿ ಸಮೀಪದ ಕೆಂಪೇಗೌಡ ಲೇಔಟ್ ನಲ್ಲಿ ಸೋಮವಾರ ಸಂಜೆ ನಡೆಯಿತು.
ಆಂಧ್ರಪ್ರದೇಶದ ಕರಿಯಪ್ಪ (36) ಹಾಗೂ ಬಿಹಾರದ ನಿಖಿಲೇಶ್ (32) ಮೃತರು. ಇವರು ಪೈಪ್ಲೈನ್ ಕಾಮಗಾರಿಗಾಗಿ ಮಣ್ಣು ತೆಗೆಯುವ ಕಾರ್ಯದಲ್ಲಿ ನಿರತರಾಗಿದ್ದರು. ಆಳೆತ್ತರದ ಗುಂಡಿಯಿಂದ ಮಣ್ಣನ್ನು ಮೇಲಕ್ಕೆ ಎತ್ತುವ ವೇಳೆ ಮೇಲಿದ್ದ ಮಣ್ಣು ಏಕಾಏಕಿ ಇವರ ಮೇಲೆ ಕುಸಿದು ಬಿತ್ತು.
ಮಣ್ಣಿನ ರಾಶಿಯಲ್ಲಿ ಸಿಲುಕಿದ ಅವರು ಸ್ಥಳದಲ್ಲೇ ಮೃತಪಟ್ಟರು. ಜೆಸಿಬಿ ಮೂಲಕ ಮೃತ ದೇಹಗಳನ್ನು ಹೊರತೆಗೆದು ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಗೆ ರವಾನಿಸಲಾಯಿತು. ಕುಂಬಳಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.