ತಾಳೆಕೆರೆ(ಮಾಗಡಿ): ದೇಹ ಮತ್ತು ಮನಸ್ಸು ಉಲ್ಲಾಸವಾಗಿ ಇಟ್ಟುಕೊಳ್ಳುವುದರ ಜತೆಗೆ ಜೀವನ ಸತ್ಯ ತಿಳಿದುಕೊಳ್ಳಲು ಯೋಗದ ದಾರಿ ಬಲು ಸಹಕಾರಿ ಎಂದು ಸಪ್ತಗಿರಿ ಸೇವಾ ಸಭಾ ಟ್ರಸ್ಟ್ನ ಅಧ್ಯಕ್ಷ ಡಾ.ಕುಮಾರ್ ತಿಳಿಸಿದರು.
ಗೊಟ್ಟಿಕೆರೆ ಗ್ರಾಮದ ವ್ಯಾಲಿ ಇಂಟರ್ ನ್ಯಾಷನಲ್ ರೆಸಿಡೆನ್ಸಿಯಲ್ ಶಾಲೆಯಲ್ಲಿ ಏರ್ಪಡಿದ್ದ ಯೋಗ ದಿನಾಚಾರಣೆಯಲ್ಲಿ ಅವರು ಮಾನಾಡಿದರು.
ಮಕ್ಕಳನ್ನು ರೋಗ ಮುಕ್ತರನ್ನಾಗಿಸಲು ಯೋಗ ಸಿದ್ದೌಷಧ. ಯಾವುದೇ ಒಂದು ವಿದ್ಯೆ ಚಿಕ್ಕಂದಿನಿಂದಲೇ ರೂಢಿಸಿಕೊಂಡರೆ ಮುಂದೆ ಅದು ಬಲಿಷ್ಠವಾಗಿ ಬೆಳೆಯುತ್ತದೆ. ವಿದೇಶಗಳಲ್ಲಿ ಯೋಗಕ್ಕೆ ವಿಶೇಷ ಮಾನ್ಯತೆ ಸಿಗುತ್ತಿದೆ. ಈ ನೆಲದಲ್ಲಿ ಹುಟ್ಟಿದ ಯೋಗ ವಿದ್ಯೆಯನ್ನು ಆಧರಿಸಿ ಗೌರವಿಸುವ ಮತ್ತು ಅದನ್ನು ಅಳವಡಿಸಿಕೊಳ್ಳುವ ಕೆಲಸ ಮಾಡಬೇಕು ಎಂದರು.
ಮುಖ್ಯಾಧಿಕಾರಿ ಡಾ.ವಿಶ್ವನಾಥ್ ಕೋಳಿವಾಡ ಮಾತನಾಡಿ, ‘ಯೋಗವಿದ್ಯೆ ವಿಜ್ಞಾನವೂ ಹೌದು ಮತ್ತು ಸಂಸ್ಕೃತಿಯೂ ಹೌದು. ನಡವಳಿಕೆಯನ್ನು ನಮಗೆ ಅರಿವಿಲ್ಲದಂತೆ ಬದಲಿಸುವ ಶಕ್ತಿ ಯೋಗಕ್ಕಿದೆ. ಸದೃಢ ದೇಹದಲ್ಲಿ ಸದೃಢ ಮನಸ್ಸಿರುತ್ತದೆ ಎಂಬುದನ್ನು ಕಂಡುಕೊಳ್ಳಬೇಕಾದರೆ ಒಂದು ವರ್ಷ ಕಾಲ ನಿಯಮಿತವಾಗಿ ಯೋಗ ಸಾಧನೆ ಮಾಡಬೇಕು’ ಎಂದರು.
ಪ್ರಾಂಶುಪಾಲ ಶ್ರೀನಿವಾಸಮಡ್ಡಿ ಮಾತನಾಡಿ, ಯೋಗ ವಿದ್ಯೆ ಕಲಿಯಲು ವಯಸ್ಸು, ಜಾತಿ, ಲಿಂಗಭೇದ ಮುಖ್ಯವಲ್ಲ. ಶ್ರದ್ಧೆ ಇರುವ ಯಾರಾದರೂ ಸರಿಯೇ ಕಲಿಯಬಹುದು. ಚಿತ್ರನಟ ಡಾ.ರಾಜ್ ಕುಮಾರ್ ತಮ್ಮ 42ನೇ ವಯಸಿನಲ್ಲಿ ಯೋಗಾಭ್ಯಾಸ ಪ್ರಾರಂಭಿಸಿದರು. ನಂತರ ಅವರು ಮಾಡಿದ ಸಾಧನೆಗೆ ಜಗತ್ತು ಬೆರಗಿನಿಂದ ನೋಡಿತು ಎಂದರು.
ಶಾಲೆಯ ನೂರಾರು ಮಕ್ಕಳು ಶಿಕ್ಷಕಿ ನಾಗಲಕ್ಷ್ಮಿ ಅವರ ಮಾರ್ಗದರ್ಶನದಲ್ಲಿ ಯೋಗಾಭ್ಯಾಸ ಮಾಡಿದರು. ಉಪಪ್ರಾಂಶುಪಾಲ ಕೆ.ಶ್ರೀನಿವಾಸಮೂರ್ತಿ, ಸಂಯೋಜನಾಧಿಕಾರಿ ವಿ.ಕೆ.ರೇಖಾ ಇದ್ದರು.