ಸಾತನೂರು (ಕನಕಪುರ): ರೈತರ ಜಮೀನಿಗೆ ಬಂದಿದ್ದ ಕಾಡಾನೆಗಳ ಹಿಂಡನ್ನು ಶುಕ್ರವಾರ ವಾಪಸ್ ಅರಣ್ಯಕ್ಕೆ ಓಡಿಸುವಾಗ ಒಂದು ಆನೆ ದಾಳಿ ನಡೆಸಿದ ಪರಿಣಾಮ ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಮತ್ತೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ತಾಲ್ಲೂಕಿನ ಚಿಕ್ಕಾಲಹಳ್ಳಿ ಬಳಿ ಆನೆ ದಾಳಿ ನಡೆದಿದ್ದು, ಸಾತನೂರು ವಲಯ ಅಚ್ಚಲು ಬೀಟ್ನ ವಾಚರ್ ಚಿಕ್ಕೀರಯ್ಯ (48) ಗಂಭೀರವಾಗಿ ಗಾಯಗೊಂಡಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ. ಅವರನ್ನು ಬೆಂಗಳೂರಿನ ಬಿ.ಜಿ.ಎಸ್. ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂರ್ನಾಲ್ಕು ದಿನಗಳಿಂದ 8–10 ಕಾಡಾನೆಗಳ ಹಿಂಡು ಅರಣ್ಯದಿಂದ ಹೊರಬಂದು ಚಿಕ್ಕಾಲಹಳ್ಳಿ, ನಾಯ್ಕನಹಳ್ಳಿ ಗ್ರಾಮದ ಸುತ್ತಲಿನ ಜಮೀನಿಗಳಿಗೆ ನುಗ್ಗಿ ರೈತರ ಫಸಲು ನಾಶ ಮಾಡಿದ್ದವು. ಇದರಿಂದ ಆಕ್ರೋಶಗೊಂಡ ರೈತರು ಕಾಡಾನೆ ನಿಯಂತ್ರಿಸುವಂತೆ ಒತ್ತಾಯಿಸಿದ್ದರು.
ಶುಕ್ರವಾರ ಬೆಳಿಗ್ಗೆ ದೊಡ್ಡಾಲಹಳ್ಳಿ ಕೆರೆಯಲ್ಲಿ ಆನೆಗಳಿರುವುದನ್ನು ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಓಡಿಸುವ ಪ್ರಯತ್ನದಲ್ಲಿದ್ದಾಗ ಚಿಕ್ಕೀರಯ್ಯನ ಮೇಲೆ ದಾಳಿ ನಡೆಯಿತು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಕ್ರಾಂತಿ, ವಲಯ ಅರಣ್ಯಾಧಿಕಾರಿಗಳಾದ ದಿನೇಶ್, ಮನ್ಸೂರ್ ಅವರು ಬೆಂಗಳೂರು ಆಸ್ಪತ್ರೆಗೆ ಭೇಟಿ ನೀಡಿ ಚಿಕ್ಕೀರಯ್ಯ ಅವರ ಆರೋಗ್ಯ ವಿಚಾರಿಸಿದರು.