ಆನೇಕಲ್: ತಾಯಿಯಿಂದ ದೂರವಾಗಿ ಅನಾಥವಾಗಿದ್ದ ಮೂರು ತಿಂಗಳ ಆನೆ ಮರಿಯೊಂದನ್ನು ಕೊಳ್ಳೆಗಾಲ ಅರಣ್ಯ ಪ್ರದೇಶದಲ್ಲಿ ಸಂರಕ್ಷಿಸಿ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ನೆಲೆ ಕಲ್ಪಿಸಲಾಗಿದೆ.
ಮೂರು ತಿಂಗಳ ಮರಿ ಆನೆಯು ತಾಯಿಯಿಂದ ಬೇರೆಯಾಗಿ ಕಾಡಿನಿಂದ ಹನೂರು ಸಮೀಪದ ಮಹಲಿಂಗನಕಟ್ಟೆ ಗ್ರಾಮದ ದನಗಳ ಜೊತೆಯಲ್ಲಿ ಬಂದಿತ್ತು. ಇದನ್ನು ಕಂಡ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ನಂತರ ಹನೂರು ವಲಯ ಅರಣ್ಯಾಧಿಕಾರಿಗಳು ಸಿಬ್ಬಂದಿಯೊಂದಿಗೆ ಆಗಮಿಸಿ ಆನೆಮರಿಯನ್ನು ಸಂರಕ್ಷಿಸಿದರು.
ಮರಿಯಾನೆಯು ತಾಯಿ ಪೋಷಣೆಯಿಂದ ದೂರವಾಗಿ, ಅಪೌಷ್ಠಿಕತೆಯಿಂದ ಬಳಲುತ್ತಿದ್ದು ಕಂಡುಬಂದಿತು.
ಅರಣ್ಯಾಧಿಕಾರಿಗಳು ತೀರ್ಮಾನಕೈಗೊಂಡು ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಹೆಚ್ಚಿನ ಆರೈಕೆಗೆ ತರಲಾಗಿದ್ದು, ಉದ್ಯಾನದ ವೈದ್ಯರು ತಪಾಸಣೆ ನಡೆಸಿ ತುರ್ತು ನಿಗಾ ವಹಿಸಿದ್ದಾರೆ. ಅಪೌಷ್ಠಿಕತೆ, ಸುಸ್ತು, ನಿತ್ರಾಣದಿಂದ ಬಳಲುತ್ತಿರುವ ಮರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಆದರೂ ಸಹ ಆನೆಮರಿಯು ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನದ ಕಾರ್ಯ ನಿರ್ವಾಹಕ ನಿರ್ದೇಶಕ ಡಾ.ರಾಜು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.