ಚನ್ನಪಟ್ಟಣ: ಪರಿಸರ ಸಮತೋಲನ ಕಾಪಾಡಲು ಹೆಚ್ಚು ಸಸಿಗಳನ್ನು ನೆಡಬೇಕು. ಜೊತೆಗೆ ಅವುಗಳನ್ನು ಪೋಷಣೆ ಮಾಡಬೇಕು ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಸ್.ಸಿದ್ದರಾಜೇಗೌಡ ಅಭಿಪ್ರಾಯ ಪಟ್ಟರು.
ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಈಚೆಗೆ ಏರ್ಪಡಿಸಿದ್ದ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಾಯು ಮಾಲಿನ್ಯ, ಶಬ್ದ ಮಾಲಿನ್ಯ, ವಾಹನಗಳ ಬೆಳಕಿನ ಮಾಲಿನ್ಯದಿಂದ ಒಟ್ಟು ಪರಿಸರ, ವಾತಾವಾರಣದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಎಲ್ಲರೂ ಇದರ ಪರಿಣಾಮವನ್ನು ಅನುಭವಿಸುತ್ತಿದ್ದೇವೆ. ನೂರಾರು ಸಸಿಗಳನ್ನು ನೆಟ್ಟು ಸಂರಕ್ಷಣೆ ಮಾಡಿ ಮರಗಳನ್ನಾಗಿಸಿದ ಸಾಲುಮರದ ತಿಮ್ಮಕ್ಕ ಅವರ ಆದರ್ಶ ಗುಣ ಎಲ್ಲರಲ್ಲೂ ಬರಬೇಕು ಎಂದರು.
ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಜಿ. ಕೆ. ರಂಗನಾಥ್ ಮಾತನಾಡಿ, 2001ರಲ್ಲಿ ವಿಶ್ವದಲ್ಲಿ ಶೇ 30ರಷ್ಟು ಅರಣ್ಯ ಇತ್ತು. ಈಗ ಕೇವಲ ಶೇ 10ರಿಂದ 15ರಷ್ಟು ಮಾತ್ರ ಉಳಿದಿದೆ. ಅರಣ್ಯ ನಾಶವಾಗುತ್ತಿರುವುದರಿಂದಲೇ ಹುಲಿ, ಚಿರತೆ, ಆನೆಯಂಥ ಕಾಡು ಪ್ರಾಣಿಗಳು ನಾಡಿಗೆ ಧಾವಿಸುತ್ತಿವೆ. ಪರಿಸರ ಮಾಲಿನ್ಯದಿಂದ ಪಕ್ಷಿ, ಪ್ರಾಣಿಗಳ ಸಂತತಿಯೂ ನಶಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.
ಉಪಪ್ರಾಚಾರ್ಯೆ ಬಿ.ಪಿ.ಪಾರ್ವತಮ್ಮ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿನ ಜನರಿಗೆ ಗಿಡಮರ ಬೆಳೆಸಲು ಅರಣ್ಯ ಇಲಾಖೆ ಪ್ರೋತ್ಸಾಹಿಸಬೇಕು. ಔಷಧಯುಕ್ತ, ಶ್ರೀಗಂಧದ ಮರಗಳನ್ನು ಬೆಳೆಸಲು ಮಾರ್ಗದರ್ಶನ ನೀಡಬೇಕು ಎಂದರು.
ಕನ್ನಡ ಅಧ್ಯಾಪಕರಾದ ಚನ್ನವೀರೇಗೌಡ, ಯೋಗೀಶ್ ಚಕ್ಕೆರೆ ಪರಿಸರ ಸಂರಕ್ಷಣೆ ಬಗ್ಗೆ ಮಾತನಾಡಿದರು. ಇಕೋ ಕ್ಲಬ್ ಸಂಚಾಲಕಿ ರೂಹಿ ಎಂ., ಶಿಕ್ಷಕರಾದ ಶಿವಕುಮಾರ್, ಪುಟ್ಟೇಗೌಡ, ಗಂಗಾಧರ್, ಮಂಜುಳಾ ದೇವಿ, ರಿಹಾನಾ ತರನಂ, ಭಾರತಿ, ಗಿರಿಜಾ ಭಾಗವಹಿಸಿದ್ದರು.
ವಿದ್ಯಾರ್ಥಿಗಳು ಕಾಲೇಜಿನ ಆವರಣ ಸ್ವಚ್ಛಗೊಳಿಸಿ ಹಲವು ಜಾತಿಯ ಗಿಡಗಳನ್ನು ನೆಟ್ಟರು.
**
ಹೆಚ್ಚು ಮರ ಬೆಳೆಸುವುದರಿಂದ ವಾತಾವರಣದಲ್ಲಿ ತಾಪಮಾನ ಪ್ರಮಾಣ ಕಡಿಮೆ ಆಗಿ ಆರೋಗ್ಯಯುತ ಜೀವನ ನಡೆಸಲು ಉಪಯುಕ್ತವಾಗುತ್ತದೆ -ಎಸ್.ಸಿದ್ದರಾಜೇಗೌಡ,
ಪ್ರಾಚಾರ್ಯ, ಚನ್ನಪಟ್ಟಣ ಸರ್ಕಾರಿ ಪದವಿಪೂರ್ವ ಕಾಲೇಜು