ಮಾಗಡಿ: ಮಕ್ಕಳಲ್ಲಿ ಕೌಶಲ ಹಾಗೂ ಮೌಲ್ಯ ಬೆಳೆಸಬೇಕೆಂದು ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯದ ಕಂಟ್ರೋಲರ್ ಡಾ.ಬಿ.ಟಿ.ವೆಂಕಟೇಶ್ ತಿಳಿಸಿದರು.
ಬಾಲಾಜಿ ಶಾಲೆಯ ಆವರಣದಲ್ಲಿ ನಡೆದ ‘ಬಾಲಾಜಿ ಉತ್ಸವ –2019’ಕ್ಕೆ ಚಾಲನೆ ನೀಡಿ ಮಾತನಾಡಿದರು.
ಪೋಷಕರು ಮತ್ತು ಶಿಕ್ಷಕರು ಮಕ್ಕಳ ಎದುರಿನಲ್ಲಿ ಸುಳ್ಳು ಹೇಳುವುದು, ಮೋಜು ಮಾಡುವುದು, ಮೊಬೈಲ್ನಲ್ಲಿ ಮುಳುಗಿರುವುದನ್ನು ಮಾಡಬಾರದು. ಆಧುನಿಕ ಯುಗದಲ್ಲಿ ಮಕ್ಕಳು ನಮಗಿಂತ ಬುದ್ಧಿವಂತರಿದ್ದಾರೆ ಎಂಬುದನ್ನು ಮರೆಯಬಾರದು ಎಂದರು.
ಪೋಷಕರು, ಶಿಕ್ಷಕರು ಮಕ್ಕಳೊಂದಿಗೆ ನಿತ್ಯ ಅರ್ಧ ಗಂಟೆಯಾದರೂ ಶಾಲೆಯಲ್ಲಿ ನಡೆದ ಪಾಠ ಬೋಧನೆ ಬಗ್ಗೆ ಸಂವಾದ ನಡೆಸಬೇಕು. ಪೋಷಕರು ಮತ್ತು ಶಿಕ್ಷಕರು ಸರಳ ಜೀವನ ರೂಢಿಸಿಕೊಳ್ಳಬೇಕು. ಕಲಿಕೆ ಮನೆಯಲ್ಲಿ ಮತ್ತು ಹೊರಗೆ ನಿರಂತರವಾಗಿ ನಡೆಯುತ್ತಿರಬೇಕು. ಗ್ರಂಥಾಲಯ, ಪ್ರಯೋಗ ಶಾಲೆ, ಮನೆಯ ಹೊರಗಿನ ವಾತಾವರಣದಲ್ಲಿ ಕಲಿಕೆ ಹೆಚ್ಚಿಗೆ ನಡೆಯಬೇಕು ಎಂದರು.
ಬಾಲಾಜಿ ಶಾಲೆ ಸಲಹೆಗಾರ ಡಾ.ಜಯರಾಮ ಶೆಟ್ಟಿ ಮಾತನಾಡಿ, ‘ಮಕ್ಕಳಲ್ಲಿ ಆದರ್ಶದ ಕಲ್ಪನೆ ಮೂಡಿಸಲು ವಿದ್ಯಾಸಂಸ್ಥೆ ನಿರತವಾಗಿದೆ. ಬಹುಜನರನ್ನು ಆಕರ್ಷಿಸುವ ಕೇಂದ್ರೀಯ ಶಾಲೆಯಂತೆ ನಮ್ಮ ಶಾಲೆಯಲ್ಲೂ ಕಲಿಕೆಗೆ ಮಹತ್ವ ನೀಡಲಾಗಿದೆ. ಶಿಕ್ಷಕರು ವಿದ್ಯಾರ್ಥಿಗಳ ಮನ ಗೆಲ್ಲಲೂ ಮುಂದಾಗಬೇಕು’ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದೇಶ್ವರ ಎಸ್.,ಬಾಲಾಜಿ ನ್ಯಾಷನಲ್ ಪಬ್ಲಿಕ್ ಶಾಲೆಯ ಆಡಳಿತ ಮಂಡಳಿ ನಿರ್ದೇಶಕಿ ಸುಧಾ ಆರ್.ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ಬಿ.ಆರ್.ರಂಗನಾಥ್, ಕಾರ್ಯದರ್ಶಿ ಕೆ.ಕುಮಾರಿ ದೇವಿ, ಸಂಸ್ಥೆ ಸಲಹೆಗಾರ ಸುದರ್ಶನ್,ಲೋಕನಾಥ್, ಸಂಸ್ಥೆ= ಪದಾಧಿಕಾರಿಗಳಾದ ಮಾಲ.ಆರ್, ಲತಾ.ಬಿ.ಆರ್, ಕರ್ನಾಟಕ ಪ್ರತಿಭಾ ಕೇಂದ್ರದ ಅಧ್ಯಕ್ಷ ಪಾಣ್ಯಂ ನಟರಾಜ್ ಇದ್ದರು.
ಶಾಲೆಯ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮನಡೆಯಿತು. ಬಹುಮಾನ ವಿತರಿಸಲಾಯಿತು.