ರಾಮನಗರ: ಬೆಂಗಳೂರು ಸೇರಿದಂತೆ 9 ಠಾಣೆಗಳಿಗೆ ಬೇಕಾಗಿದ್ದ ದರೋಡೆಕೋರರನ್ನು ಚನ್ನಪಟ್ಟಣ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಮಾದನಾಯಕನಹಳ್ಳಿಯ ಮಣಿ (27), ಗಿರಿನಗರದ ರೇಣುಕುಮಾರ್ ಅಲಿಯಾಸ್ ಟಾಂಗು (27), ಬಸವನಗುಡಿಯ ವಿಜಿ ಅಲಿಯಾಸ್ ವಿಜಯ್(26) ಮತ್ತು ಮದ್ದೂರು ತಾಲ್ಲೂಕಿನ ಕುಕ್ಕೊರುದೊಡ್ಡಿ ಗ್ರಾಮದ ಶಿವ ಅಲಿಯಾಸ್ ಶಿವಪ್ರಸಾದ್ (29) ಬಂಧಿತರು.
ಇವರೆಲ್ಲರೂ ವಿವಿಧ ವೃತ್ತಿ ಮಾಡಿಕೊಂಡಿದ್ದು, ಕಳ್ಳತನವನ್ನು ಪ್ರವೃತ್ತಿಯಾಗಿಸಿಕೊಂಡಿದ್ದರು. ಅಪರಾಧ ಕೃತ್ಯ ಎಸಗಿ ಜೈಲು ಸೇರಿದ್ದರು. ಅಲ್ಲಿಯೇ ಎಲ್ಲರೂ ಭೇಟಿಯಾಗಿ ಹೊರಬಂದ ಬಳಿಕ ತಂಡ ಕಟ್ಟಿಕೊಂಡು ದರೋಡೆ ನಡೆಸುತ್ತಿದ್ದರು ಎನ್ನಲಾಗಿದೆ.
‘ಆರೋಪಿಗಳಿಂದ ಒಟ್ಟು 315 ಗ್ರಾಂ ಚಿನ್ನ, 7 ದ್ವಿಚಕ್ರವಾಹನಗಳನ್ನು ವಶಪಡಿಸಿ ಕೊಂಡಿದ್ದು, ಇದರ ಒಟ್ಟು ಮೌಲ್ಯ ₹18 ಲಕ್ಷ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಸಂತೋಷ ಬಾಬು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ಚನ್ನಪಟ್ಟಣ, ಸಾತನೂರು, ರಾಮನಗರ ಗ್ರಾಮೀಣ, ತಲಘಟ್ಟಪುರ, ಕೆಂಗೇರಿ, ಗಿರಿನಗರ, ಜ್ಞಾನಭಾರತಿ, ಚಂದ್ರಾಲೇಔಟ್, ಸುಬ್ರಮಣ್ಯನಗರ ಪೊಲೀಸ್ ಠಾಣೆಗಳಲ್ಲಿ ಆರೋಪಿಗಳ ಮೇಲೆ ಒಟ್ಟು 14 ಪ್ರಕರಣಗಳು ದಾಖಲಾಗಿವೆ’ ಎಂದು ಮಾಹಿತಿ ನೀಡಿದರು.
ಪತ್ತೆಯಾಗಿದ್ದು ಹೇಗೆ?: ಚನ್ನಪಟ್ಟಣದ ಕೆಂಗಲ್ ಬಳಿ ಕಳೆದ ಜೂನ್ 30ರಂದು ಬೆಳಿಗ್ಗೆ 5 ಗಂಟೆ ಸುಮಾರಿಗೆ ಐವರು ದುಷ್ಕರ್ಮಿಗಳು ಆಯುಧಗಳನ್ನು ಹಿಡಿದು ದರೋಡೆಗೆ ಹೊಂಚು ಹಾಕುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಚನ್ನಪಟ್ಟಣ ಗ್ರಾಮೀಣ ಠಾಣೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಈ ನಾಲ್ವರು ಆರೋಪಿಗಳು ಪೊಲೀಸರಿಗೆ ಅತಿಥಿಯಾಗಿದ್ದಾರೆ. ವಿಚಾರಣೆ ವೇಳೆ ಆರೋಪಿಗಳ ಹಿಂದಿನ ಕೃತ್ಯಗಳು ಬೆಳಕಿಗೆ ಬಂದಿವೆ.