ಶಿವಮೊಗ್ಗ: ದಾವಣಗೆರೆ, ಶಿವಮೊಗ್ಗ ಹಾಗೂ ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ(ಶಿಮುಲ್) ಚುನಾವಣೆಯ ವೇಳೆ ವಿವಿಧ ಪಕ್ಷಗಳ ಬೆಂಬಲಿಗರ ನಡುವೆ ಗಲಾಟೆ ನಡೆದಿದ್ದು, ಎರಡು ಗುಂಪುಗಳನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.
ತಾಲ್ಲೂಕಿನ ಮಾಚೇನಹಳ್ಳಿಯ ಶಿಮುಲ್ ಕಚೇರಿಯಲ್ಲಿ ಸೋಮವಾರ ನಿರ್ದೇಶಕರ ಆಯ್ಕೆಗೆ ಚುನಾವಣೆ ನಡೆಯುತ್ತಿತ್ತು. ಈ ವೇಳೆಬಿಜೆಪಿ ಬೆಂಬಲಿತ ಅಭ್ಯರ್ಥಿ ಜಗದೀಶ್ ಬಣಕಾರ್ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಹನುಮನಹಳ್ಳಿ ಬಸವರಾಜ್ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದಿದೆ. ಪರಸ್ಪರ ಮಾತು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ.ಈ ವೇಳೆ ಪೊಲೀಸರು ಗುಂಪು ಚದುರಿಸುವ ಯತ್ನ ಮಾಡಲು ಮುಂದಾಗಿದ್ದಾರೆ. ಆದರೂ ಪೊಲೀಸರ ಮಾತು ಕೇಳದೆ ಕೆಲವರುಕೊರಳ ಪಟ್ಟಿ ಹಿಡಿದು ಹೊಡೆದಾಟ ನಡೆಸಲು ಶುರು ಮಾಡಿದ್ದಾರೆ. ಈ ಸಂದರ್ಭ ಪೊಲೀಸರು ಉದ್ರಿಕ್ತರನ್ನು ಚದುರಿಸಲು ಲಾಠಿ ಬೀಸಿದ್ದಾರೆ.
ಪೊಲೀಸರ ಲಾಠಿಯ ಏಟಿಗೆ ಗುಂಪಿನಲ್ಲಿದ್ದವರು ಚೆಲ್ಲಾಪಿಲ್ಲಿಯಾಗಿ ಓಡಿ ಹೋದರು. ನಂತರ ಪೊಲೀಸರು ಶಿಮುಲ್ ಮುಂಭಾಗ ನಿಂತಿದ್ದ ಜನರನ್ನು ಚದುರಿಸಿದರು.