ಶಿವಮೊಗ್ಗ: ಕಾಂಗ್ರೆಸ್ ನಾಯಕರ ತ್ಯಾಗ ಬಲಿದಾನದಿಂದ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀ.ನಾ.ಶ್ರೀನಿವಾಸ್ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಸೇವಾದಳದ 95ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೇಶದ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಅಪಾರವಾಗಿದೆ. ದೇಶದ ಉಳುವಿಗಾಗಿ ರಕ್ತವನ್ನೇ ಸುರಿಸಿದವರು ಕಾಂಗ್ರೆಸ್ ನಾಯಕರೇ ಹೊರತು ಬೇರ್ಯಾರೂ ಅಲ್ಲ. ದೇಶಕ್ಕೆ ಕಾಂಗ್ರೆಸ್ ಕೊಡುಗೆ ಏನು ಎಂದು ಕೇಳುವವರು ಪಕ್ಷದ ಇತಿಹಾಸ ತಿಳಿದುಕೊಳ್ಳಲಿ. ದೇಶದಲ್ಲಿ ಸಾಮಾನ್ಯ ಜನರಿಗೂ ನ್ಯಾಯ ಸಿಗಲು ಅಂಬೇಡ್ಕರ್ ನೀಡಿದ ಸಂವಿಧಾನ ಕಾರಣ. ಆದರೆ, ಬಿಜೆಪಿ ನಾಯಕರು ‘ದೇಶದ ಸಂವಿಧಾನವನ್ನೇ ಬದಲಾಯಿಸುತ್ತೇವೆ’ ಎನ್ನುವ ಮೂಲಕ ದೇಶವನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ. ಇಂತಹ ದೇಶದ್ರೋಹಿಗಳಿಗೆ ಕಾಂಗ್ರೆಸ್ ಬಗ್ಗೆಯಾಗಲಿ, ದೇಶದ ಸಂವಿಧಾನದ ಬಗ್ಗೆಯಾಗಲಿ ಮಾತನಾಡುವ ಹಕ್ಕಿಲ್ಲ ಎಂದರು.
ಕಾಂಗ್ರೆಸ್ ಮುಖಂಡ ಮಹಮ್ಮದ್ ಸಮೀವುಲ್ಲಾ ಮಾತನಾಡಿ, ‘ದೇಶದ ಸ್ವಾತಂತ್ರ್ಯಕ್ಕೆ ಮುಸ್ಲಿಮರ ಕೊಡುಗೆ ಅಪಾರ. ಸ್ವಾತಂತ್ರ್ಯ ಪೂರ್ವದಿಂದಲೂ ಮುಸ್ಲಿಮರು ಭಾರತದಲ್ಲಿದ್ದಾರೆ. ಹಲವು ಹೋರಾಟ, ಚಳವಳಿಯ ಮೂಲಕ ದೇಶದ ಪ್ರಗತಿಗೆ ಕೈ ಜೋಡಿಸುತ್ತಿದೆ. ಆದರೆ, ಕೆಲವು ಕೋಮುವಾದಿಗಳು ಮುಸ್ಲಿಂ ಸಮುದಾಯವನ್ನು ಭಾರತ
ದಿಂದ ತೊಲಗಿಸಬೇಕು ಎನ್ನುತ್ತಿರುವುದು ಖಂಡನೀಯ’ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳದ ರಾಜ್ಯ ಘಟಕದ ಅಧ್ಯಕ್ಷ ಎಸ್.ಪ್ಯಾರಿಜಾನ್, ಜಿಲ್ಲಾ ಕಾಂಗ್ರೆಸ್ ಸೇವಾದಳದ ಮುಖ್ಯ ಸಂಘಟಕ ವೈ.ಎಚ್.ನಾಗರಾಜ್, ಪ್ರಮುಖರಾದ ಚಂದ್ರಶೇಖರ್, ರಾಮೇಗೌಡ, ಜಿ.ಪಲ್ಲವಿ, ನೇತಾಜಿ, ರಾಜಗೋಪಾಲ್, ಉಮಾಪತಿ ಇದ್ದರು.