ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ಯಾಗರ್ತಿ: ಕಂಪನಿ ಕೆಲಸ ಬಿಟ್ಟು ಕೃಷಿಯಲ್ಲಿ ನೆಮ್ಮದಿ ಕಂಡ ಯುವಕ

ಯುವಕರಿಗೆ ಮಾದರಿಯಾದ ವೀರಾಪುರದ ಪ್ರೀತಮ್
Last Updated 26 ಜನವರಿ 2022, 3:53 IST
ಅಕ್ಷರ ಗಾತ್ರ

ತ್ಯಾಗರ್ತಿ: ಒತ್ತಡದ ಜೀವನದಿಂದ ಕಂಪನಿಕೆಲಸ ಬಿಟ್ಟು ಕೃಷಿಯಲ್ಲಿ ನೆಮ್ಮದಿ ಕಂಡಿಕೊಂಡಿದ್ದಾರೆ ಸಮೀಪದ ವೀರಾಪುರದ ಯುವಕ ಪ್ರೀತಮ್. ಸಾವಯವ ಕೃಷಿಯಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡಿರುವ ಅವರು ಯುವಕರಿಗೆ ಮಾದರಿಯಾಗಿದ್ದಾರೆ.

ಸಾಗರ ತಾಲ್ಲೂಕಿನ ಹಿರೇಬಿಲಗುಂಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೀರಾಪುರ ಗ್ರಾಮದ ಮಲ್ಲಿಕಾರ್ಜುನಗೌಡರ ಪುತ್ರ ಪ್ರೀತಮ್‌ ನೆಮ್ಮದಿ ಜೀವನ ಅರಸಿ ಪಟ್ಟಣ ಬಿಟ್ಟು ಹಳ್ಳಿ ಸೇರಿದವರು. ಬದುಕಿಗೆ, ನೆಮ್ಮದಿಗಾಗಿ ಕೃಷಿಯನ್ನು ನೆಚ್ಚಿಕೊಂಡಿರುವ ಅವರು ಸಮಗ್ರ ಕೃಷಿ ಪದ್ಧತಿ ಮೂಲಕ ಉತ್ತಮ ಆದಾಯ ಗಳಿಸುತ್ತಿದ್ದಾರೆ.

ಎಂಬಿಎ ಮುಗಿಸಿ 6 ವರ್ಷಗಳ ಕಾಲಕಂಪನಿಯೊಂದರಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅವರು ಅಲ್ಲಿನ ಒತ್ತಡದ ಬದುಕಿಗೆ ವಿದಾಯ ಹೇಳಿ, ನೆಮ್ಮದಿಯ ಬದುಕಿಗೆ ವ್ಯವಸಾಯ ಆಯ್ಕೆಮಾಡಿಕೊಂಡವರು.

8 ಎಕರೆಯ ಜಮೀನಿನಲ್ಲಿ ಅಡಿಕೆ, ತೆಂಗು, ಬಾಳೆ, ರಬ್ಬರ್, ಹಲಸು, ಮಾವು, ಕಾಳುಮೆಣಸುಗಳನ್ನು ಹೀಗೆ ಸಮಗ್ರ ಕೃಷಿ ಪದ್ಧತಿ ಅನುಸರಿಸಿದ್ದಾರೆ. ಅವರ ಜಮೀನಿನಲ್ಲೀಗ ಬೆಳೆಗಳು ನಳನಳಿಸುತ್ತಿವೆ.

ತಮ್ಮ ಖುಷ್ಕಿ ಜಮೀನಿನಲ್ಲಿ2 ಕೊಳವೆಬಾವಿಗಳನ್ನು ಕೊರೆಯಿಸಿಪ್ರತಿ ದಿನ ಸರದಿಯಂತೆಗಿಡಗಳಿಗೆ ನೀರುಣಿಸುತ್ತಾರೆ. ಸಕಾಲಕ್ಕೆ ಸರಿಯಾಗಿ ಪೌಷ್ಟಿಕ ಗೊಬ್ಬರಗಳನ್ನು ನೀಡಿ ಗಿಡಗಳು ಸಮೃದ್ಧಿಯಾಗಿ ಬೆಳೆಯುವಂತೆ ನೋಡಿಕೊಂಡಿದ್ದಾರೆ. ಅಡಿಕೆ ಸಸಿಗಳನ್ನು ನೆಟ್ಟು ಅದರೊಂದಿಗೆ ಮಿಶ್ರ ಬೆಳೆಯಾಗಿ ಬಾಳೆ ಹಾಗೂ ತೆಂಗಿನ ಗಿಡಗಳನ್ನು ಹಾಕಿದ್ದಾರೆ. ಪ್ರತಿ ಅಡಿಕೆ ಗಿಡಗಳಿಗೂ ಕಾಳುಮೆಣಸಿನ ಬಳ್ಳಿಯನ್ನುಹಾಕಿದ್ದಾರೆ.

ಬಾಳೆ ಹಾಗೂ ಕಾಳುಮೆಣಸಿನಿಂದ ಬರುವ ಆದಾಯವು ಅಡಿಕೆ ಗಿಡಗಳ ಪಾಲನೆ ಪೋಷಣೆಗೆ ಸಹಕಾರಿಯಾಗಿದೆ. ಅಡಿಕೆ ಗಿಡಗಳಲ್ಲಿ ಫಸಲು ಬರುತ್ತಿದೆ. ಜತಗೆ ರಬ್ಬರ್‌ ಕೂಡ ಹಾಕಿರುವುದರಿಂದ ಉತ್ತಮಆದಾಯ ಇದೆ.

‘ನೌಕರಿಯಲ್ಲಿದ್ದಾಗ ಸಿಗುತ್ತಿದ್ದ ವೇತನಕ್ಕಿಂತಲೂ ಹೆಚ್ಚಿನ ಆದಾಯ ಗಳಿಸುತ್ತಿದ್ದೇನೆ. ಸಮಗ್ರ ಕೃಷಿ ಪದ್ಧತಿ ಕೈಹಿಡಿದಿದೆ.ಕೂಲಿಕಾರ್ಮಿಕರಸಮಸ್ಯೆಯನ್ನು ಸರಿದೂಗಿಸಿಕೊಂಡು ಜಮೀನಿನಲ್ಲಿ ಪರಿಶ್ರಮದಿಂದ ಕೆಲಸ ಮಾಡಿದರೆ ಆದಾಯದ ಜತೆಗೆ ನೆಮ್ಮದಿ ಜೀವನ ಸಾಗಿಸಬಹುದು’ ಎನ್ನುತ್ತಾರೆ ಪ್ರೀತಮ್‌.

‘ಭೂಮಿ ತಾಯಿಗೆ ಹಣ ಹಾಕಿದರೆ ಮೋಸವಿಲ್ಲ. ಇಂದಲ್ಲ, ನಾಳೆ ಅದು ಬಂದೇ ಬರುತ್ತದೆ. ಅಲ್ಪಾವಧಿಯ ಲಾಭವನ್ನು ನೋಡದೇ ದೀರ್ಘಾವಧಿಯ ಲಾಭದತ್ತ ಎದುರು ನೋಡಿದರೆ ಕೃಷಿಯಲ್ಲಿನಷ್ಟವಿಲ್ಲ. ಕೃಷಿಯನ್ನು ನಂಬಿ ವ್ಯವಸ್ಥಿತವಾಗಿ ನಡೆಸಿಕೊಂಡು ಬಂದರೆ ಉತ್ತಮ ಆದಾಯ ಸಾಧ್ಯ. ಈ ಅರಿವು ರೈತರಲ್ಲಿ ಇರಬೇಕು’ ಎಂದು ತಮ್ಮ ಕೃಷಿ ಅನುಭವ ಬಿಚ್ಚಿಡುತ್ತಾರೆ ಅವರು.

ನೌಕರಿ ಬಿಟ್ಟು ಕೃಷಿಯಲ್ಲಿ ಆದಾಯ ಕಂಡುಕೊಂಡಿರುವ ಪ್ರೀತಮ್ಈ ಭಾಗದ ಯುವಕರಿಗೆ ಪ್ರೇರಣೆ.

*
ತಂದೆಯವರು ಮೊದಲಿನಿಂದಲೂ ಕೃಷಿಯನ್ನೆ ಅವಲಂಬಿಸಿದ್ದರು. ಅವ‌ರ ಕೃಷಿ ಕಾಯಕವೇ ನನಗೆ ಪ್ರೇರಣೆ. ಅನುಭವದಿಂದ ವ್ಯವಸ್ಥಿತವಾಗಿ ಕೃಷಿ ಕೈಗೊಂಡರೆ ಲಾಭ ಸಾಧ್ಯ.
-ಪ್ರೀತಮ್‌, ಯುವ ರೈತ, ವೀರಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT