ತೀರ್ಥಹಳ್ಳಿ: ವಿವಾಹದ ಖರ್ಚಿಗೆ ಕೂಡಿಟ್ಟ ₹ 1 ಲಕ್ಷ ಹಣವನ್ನು ತಾನು ಓದಿದ ಸರ್ಕಾರಿ ಶಾಲೆಗೆ ದೇಣಿಗೆ ನೀಡುವ ಮೂಲಕ ಯುವತಿಯೊಬ್ಬರು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ತಾಲ್ಲೂಕಿನ ಹೊನ್ನೇತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನಸಗಾರು ಗ್ರಾಮದ ಟೀಕಪ್ಪಗೌಡ, ಹೇಮಾವತಿ ದಂಪತಿ ಪುತ್ರಿ ಚೇತನಾ ಈ ನಿರ್ಧಾರ ತೆಗೆದುಕೊಂಡು ಮಾದರಿಯಾದ ವಧು.
ಹೊನ್ನೇತಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಗುಡ್ಡೇಕೇರಿ ಸರ್ಕಾರಿ ಪ್ರೌಢಶಾಲೆಗೆ ತಲಾ ₹ 50 ಸಾವಿರ ದೇಣಿಗೆ ನೀಡಿ ತಾನು ಕಲಿತ ಶಾಲೆಯ ಅಭಿವೃದ್ಧಿಗೆ ಸಹಕರಿಸಿದ್ದಾರೆ ಚೇತನಾ.
ವಿವಾಹ ಕಾರ್ಯಕ್ಕೆ ಕೂಡಿಟ್ಟ ಹಣ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಬಳಸಿ, ಸರಳ ವಿವಾಹವಾಗಲು ಚೇತನಾ ಮುಂದಾಗಿದ್ದಾರೆ.
ಚೇತನಾ ಅವರು ಮನಶಾಸ್ತ್ರದಲ್ಲಿ ಪಿಎಚ್.ಡಿ ಪಡೆದಿದ್ದಾರೆ. ಸಾಮಾಜಿಕ ಚಿಂತನೆಗಳನ್ನು ಅಳವಡಿಸಿಕೊಂಡು, ಸರಳ ವಿವಾಹವಾಗಲು ನಿರ್ಧರಿಸಿರುವ ಅವರ ವಿವಾಹ ನವೆಂಬರ್ 26 ರಂದು ಮೈಸೂರಿನಲ್ಲಿ ನಡೆಯಲಿದೆ.